ದೇವರಾಜು ಅರಸು ಶ್ರೇಷ್ಠ ಸಾಮಾಜಿಕ ಸುಧಾರಕ: ಜಾರಕಿಹೊಳಿ

| Published : Sep 01 2024, 01:55 AM IST

ಸಾರಾಂಶ

ತಳ ಸಮುದಾಯದವರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾದರೆ ಮೇಲ್ಚರ್ಗದವರ ದಬ್ಬಾಳಿಕೆಗೆ ಕಡಿವಾಣ ಬೀಳುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಳ ಸಮುದಾಯದವರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾದರೆ ಮೇಲ್ಚರ್ಗದವರ ದಬ್ಬಾಳಿಕೆಗೆ ಕಡಿವಾಣ ಬೀಳುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಶನಿವಾರ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ನೌಕರರ ವಿಚಾರ ವೇದಿಕೆ ಆಯೋಜಿಸಿದ್ದ ‘ದೇವರಾಜ ಅರಸು 109ನೇ ಜಯಂತ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಉಳುವವನಿಗೆ ಭೂಮಿ, ಹಾವನೂರು ಆಯೋಗ, ಬಡತನ ನಿರ್ಮೂಲನೆಯಂತಹ ಭವಿಷ್ಯದ ಯೋಜನೆಗಳನ್ನು ಜಾರಿಗೆ ತಂದ ರಾಜ್ಯದ ಶ್ರೇಷ್ಠ ಸಾಮಾಜಿಕ ಸುಧಾರಕ. ಹಿಂದುಳಿದವರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ಅರಸು ನೀಡಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ತಳಸಮುದಾಯದವರು ಸಮಾಜದಲ್ಲಿ ಏಳಿಗೆ ಸಾಧಿಸಬೇಕೆಂದು ಸಲಹೆ ನೀಡಿದರು.

ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಮಾತನಾಡಿ, ದೇವರಾಜ ಅರಸು ಅಧಿಕಾರವಧಿಯಲ್ಲಿ ಬಹುತೇಕ ಕೃಷಿ ಭೂಮಿಗಳು ಮೇಲ್ವರ್ಗದವರ ಕೈಯಲ್ಲಿತ್ತು, ಆದರೆ, ದೇವರಾಜ ಅರಸು ಭೂ ಸುಧಾರಣೆ ಕಾಯಿದೆ ಪರಿಚಯಿಸುವ ಮೂಲಕ ತಳ ಸಮುದಾಯದ ಗೇಣಿದಾರರಿಗೆ ಕೃಷಿ ಭೂಮಿ ದೊರೆಯುವಂತೆ ಮಾಡಿ, ಲಕ್ಷಾಂತರ ರೈತರಿಗೆ ಆಸರೆಯಾದರು. ಇದರಿಂದ ಸುಮಾರು 15 ಲಕ್ಷ ಕೃಷಿ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಈ ವೇಳೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ವಿಧಾನ ಪರಿಷತ್‌ ಸಭಾಪತಿ ಆರ್.ವಿ. ಸುದರ್ಶನ್‌, ಅಹಿಂದ ವಿಚಾರ ವೇದಿಕೆಯ ಸಂಚಾಲಕ ಬಸವರಾಜ್‌ ಸಂಗಪ್ಪನವರ್‌ ಮತ್ತಿತರರಿದ್ದರು.