ಸಾರಾಂಶ
ಶಿರಹಟ್ಟಿ: ಸಾಮವೇದದ ಸೃಷ್ಠಿಕರ್ತ, ಸಂಗೀತಾರಾಧಕ ಹಾಗೂ ಭಕ್ತಿ ಮಾರ್ಗದರ್ಶಕ ಸವಿತಾ ಮಹರ್ಷಿಯ ಜೀವನ ಚರಿತ್ರೆ ಅನನ್ಯವಾದುದು ಎಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ ಲಮಾಣಿ ಹೇಳಿದರು.
ಮಂಗಳವಾರ ತಹಸೀಲ್ದಾರ ಕಾರ್ಯಾಲಯದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ವೇದಗಳಲ್ಲಿ ಸವಿತಾ ಮಹರ್ಷಿಯನ್ನು ಸಾಮವೇದದ ಸೃಷ್ಠಿಕರ್ತ ಎಂದು ಕರೆಯಲ್ಪಡುತ್ತಿದ್ದು, ಅಂತಹ ಮಹಾನ್ ಋಷಿಮುನಿಗಳ ಜಯಂತಿ ರಥಸಪ್ತಮಿ ದಿನದಂದು ಸರ್ಕಾರದಿಂದ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.ಸವಿತಾ ಎಂದರೆ ಜನ್ಮ ನೀಡಿದಾತ. ಗಾಯತ್ರಿ ಮಾತೆಯ ನಾಮದೊಂದಿಗೆ ಸವಿತಾ ಮಹರ್ಷಿ ಉನ್ನತ ಸ್ಥಾನ ಕಾಣಬಹುದು. ಬ್ರಹ್ಮಜ್ಞಾನ ಹೊಂದಿರುವ ಸವಿತಾ ಮಹರ್ಷಿ ಶಿವನ ಬಲಗಣ್ಣಿನ ಮೂಲಕ ಜನ್ಮತಾಳಿದಾತ ಎಂಬುದನ್ನು ಪುರಾಣ ಐತಿಹ್ಯಗಳಲ್ಲಿ ಕಂಡುಬರುತ್ತದೆ. ಅಂತಹ ಮಹಾನ್ ದಾರ್ಶನಿಕರ ಜೀವನ ಸಾಧನೆ ಅರ್ಥಮಾಡಿಕೊಳ್ಳಬೇಕು. ಕ್ಷೌರಿಕರ ಮೂಲ ಪುರುಷ ಸವಿತಾ ಮಹರ್ಷಿ ಜಯಂತಿಯನ್ನು ಎಲ್ಲ ವರ್ಗಗಳು ಆಚರಿಸಿ ಸಾಮರಸ್ಯ ಮತ್ತು ಬ್ರಾತೃತ್ವದ ಬೀಜ ಬಿತ್ತಬೇಕು ಎಂದು ಹೇಳಿದರು.
ಪ್ರಸ್ತುತ ಸಮಾಜದಲ್ಲಿ ಶರಣರ ತತ್ವಗಳ ಪಾಲನೆ ಅವಶ್ಯವಾಗಿದ್ದು. ಕೆಲವರ ಮಾತುಗಳು ದೈವ ಪ್ರತಿಬಿಂಬಿಸುವಂತಿರುತ್ತವೆ. ಇನ್ನು ಕೆಲವರ ಮಾತುಗಳು ಆತ್ಮ ಸ್ಪರ್ಶಿಸುವಂತಿರುತ್ತವೆ. ಇವುಗಳನ್ನು ನಮ್ಮ ನಿತ್ಯ ಜೀನವದಲ್ಲಿ ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬ ಶರಣರ ಕೊಡುಗೆ ಸಮಾಜಕ್ಕೆ ಪ್ರಭಾವ ಬೀರುವಂತಹ ಅಂಶ ಒಳಗೊಂಡಿವೆ. ಜಾತಿ, ಲಿಂಗ, ಧರ್ಮ,ಭೇದ-ಭಾವವಿಲ್ಲದೇ ಸ್ಪಷ್ಟವಾದ ಗುಣ ಹೊಂದಿದ ಶರಣರ ಭೋದನೆಗಳು ಇಂದಿನ ಪ್ರಚಲಿತ ವಿದ್ಯಮಾನಕ್ಕೆ ಅವಶ್ಯ ಎಂದರು.ಯುವ ಮುಖಂಡ ನಜೀರ್ ಡಂಬಳ ಮಾತನಾಡಿ, ಜಾತಿ ವ್ಯವಸ್ಥೆಯಿಂದ ಮನುಷ್ಯನ ಮನಸ್ಸುಗಳು ವಿಕಾರವಾಗಿವೆ. ಜಾತಿಗೊಂದು ಜಯಂತಿ ಆಯಾ ಜಾತಿಗೆ ಸೀಮಿತವಾಗಿ ಆಚರಿಸುವುದು ಬೇಡ. ಪ್ರಜಾಪ್ರಭುತ್ವದ ಸಿದ್ಧಾಂತ ಸಾರಿದ ಶರಣರ ತತ್ವ ಸಿದ್ಧಾಂತ ನಾವೆಲ್ಲರೂ ಇಂದು ಅಳವಡಿಸಿಕೊಳ್ಳಬೇಕಾಗಿದೆ. ಶರಣರ ಜಯಂತಿಗಳಿಗೆ ಅರ್ಥ ಬರಬೇಕಾದರೆ ಸರ್ವ ಜನಾಂಗದವರು ಜಯಂತಿಯಲ್ಲಿ ಹಾಜರಿರಬೇಕು.ಇದರಿಂದ ಶರಣರು, ಮಹನೀಯರು, ತತ್ವಜ್ಞಾನಿಗಳಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಸವಿತಾ ಸಮಾಜದ ತಾಲೂಕು ಘಟಕ ಅಧ್ಯಕ್ಷ ನಾಗರಾಜ ಆರೆಪಲ್ಲಿ ಮಾತನಾಡಿ, ಶರಣರ, ಸಂತರ ಜೀವನ ಸಾಧನೆ ತಿಳಿಯಲೆಂದು ಸರ್ಕಾರ ಮಹಾ ಮಹಿಮರ ಜಯಂತಿ ಆಚರಣೆ ಮಾಡುತ್ತಿದ್ದು, ಅವರ ತತ್ವಾದರ್ಶ ನಾವೆಲ್ಲರೂ ಅರಿತುಕೊಳ್ಳಬೇಕಿದೆ. ಪ್ರತಿ ಜಯಂತಿಗೆ ತನ್ನದೇ ಆದ ವಿಶೇಷತೆ ಇರುತ್ತದೆ. ಬಸವಣ್ಣನ ಕಾಲದಿಂದ ಎಲ್ಲ ಶರಣರು ಸಮಾಜದಲ್ಲಿ ಅಡಗಿರುವ ಮೌಢ್ಯತೆ ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದರು.ಸವಿತಾ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಸಮಾಜದ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡು ಪ್ಯಾಕೇಜ ಘೋಷಣೆ ಮಾಡಬೇಕು. ಕ್ಷೌರಿಕ ಕುಟುಂಬ ಅತ್ಯಂತ ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದು, ಕಾರ್ಮಿಕರಿಗೆ ನೀಡುವ ಸೌಲಭ್ಯ ಹಾಗೂ ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು.
ವೆಂಕಟೇಶ ಅರೆಪಲ್ಲಿ, ನಾರಾಯಣ ಅರೆಪಲ್ಲಿ, ಲಕ್ಷ್ಮಣ ಬಾರ್ಬರ್, ಬಾಲರಾಜ ಕಲವರಾಲ, ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕು ಘಟಕ ಅಧ್ಯಕ್ಷ ಹಸನ್ ತಹಸೀಲ್ದಾರ್, ಅಶೋಕ ವರವಿ, ಪ್ರಕಾಶ ಬಾರ್ಬರ, ಶ್ರೀಕಾಂತ ಬಾರ್ಬರ್, ಬಾಬಾಜಾನ ಕೋಳಿವಾಡ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.