ಕನ್ನಡಪ್ರಭ ವಾರ್ತೆ ಅರಕಲಗೂಡು

ಸರ್ಕಾರದ ಆದೇಶದಂತೆ ಹೈ ರಿಸ್ಕ್‌ನಲ್ಲಿ ಕೆಲಸ ಮಾಡುವ ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಮಸಾಜ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸವಿತಾ ಸಮಾಜದ ಎಲ್ಲಾ ಬಂಧುಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಆಡಳಿತ ಅಧಿಕಾರಿಗಳಾದ ಡಾ. ಪುಷ್ಪಲತಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಲತಲಾಂತರದಿಂದ ಸಮಾಜದಲ್ಲಿ ಜನರು ಸ್ವಚ್ಛತೆ, ಶುಭ್ರವಾಗಿರುವಂತೆ ಸೇವೆ ಸಲ್ಲಿಸುತ್ತಾ ಬಂದಿರುವ ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್ ಹಾಗೂ ಮಸಾಜ್ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹಾಗೂ ಮಾಲೀಕರಿಗೆ ಎಚ್ಐವಿ ಏಡ್ಸ್, ಕ್ಷಯ ರೋಗ, ಕಾಮಾಲೆ, ವೆರಿಕೋಸ್ ಹೀಗೆ ಹಲವಾರು ಕಾಯಿಲೆಗಳ ಕುರಿತು ಅರಿವು ಮೂಡಿಸಿ ಹಾಗೂ ಅವರು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕೆಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕ ಪರಶುರಾಮ ಶಿರೂರ ಅವರು ಮಾತನಾಡಿ, ಇವತ್ತು ಸವಿತಾ ಸಮಾಜದ ಎಲ್ಲ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ. ಇಡೀ ದೇಶದಲ್ಲಿ ಹೈ ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವಂಥ ಕಾರ್ಮಿಕರಲ್ಲಿ ನೀವು ಕೂಡ ಒಬ್ಬರು. ನಿಮ್ಮ ಆರೋಗ್ಯವೂ ಅಷ್ಟೇ ಮುಖ್ಯವಾಗಿರುತ್ತದೆ, ಅದೇ ರೀತಿ ಇಡೀ ದೇಶದಲ್ಲಿ ಎಚ್ ಐವಿ ಸೋಂಕಿತರ ಸಂಖ್ಯೆ ಕರ್ನಾಟಕ 3ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಹಾಸನ ಜಿಲ್ಲೆ 13ನೇ ಸ್ಥಾನದಲ್ಲಿದ್ದು 13,000 ಕ್ಕಿಂತ ಹೆಚ್ಚು ಜನ ಜಿಲ್ಲೆಯಲ್ಲಿ ಸೋಂಕಿತರು ಇದ್ದು ಅರಕಲಗೂಡು ಹಾಸನ ಜಿಲ್ಲೆಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ, ತಾಲೂಕಿನಲ್ಲಿಯೂ 350 ಕ್ಕಿಂತ ಹೆಚ್ಚು ಜನರು ಎಆರ್‌ಟಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹಾಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬೇರೆಬೇರೆ ರಾಜ್ಯಗಳಿಂದ ಆಗಮಿಸಿದಂಥ ವಲಸಿಗರಿಂದ ಸೋಂಕಿತ ಪ್ರಕರಣಗಳು ಕಂಡು ಬರುತ್ತಿದ್ದು, ಆದ್ದರಿಂದ ಬ್ಯೂಟಿ ಪಾರ್ಲರ್, ಮಸಾಜ್, ಸ್ಪಾ, ಸಲೂನ್ ಗಳಲ್ಲಿ ಹಾಗೂ ಅಡಿಕೆ ಫ್ಯಾಕ್ಟರಿ, ತಂಬಾಕು ಉತ್ಪಾದನಾ ಫ್ಯಾಕ್ಟರಿ, ಜೆಲ್ಲಿ ಫ್ಯಾಕ್ಟರಿಗಳಲ್ಲಿ ಹಾಗೂ ರೋಡ್ ಕೆಲಸ ಮಾಡುವಂತಹ ಕಾರ್ಮಿಕರು, ವಿವಿಧ ಕಾರ್ಮಿಕರನ್ನು ಗುರುತಿಸಿ ಅವರುಗಳಿಗೆ ಆರೋಗ್ಯದ ಅರಿವು ಹಾಗೂ ತಪಾಸಣಾ ಶಿಬಿರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಎಚ್ಐವಿ ಏಡ್ಸ್ ಹರಡುವಂಥ ಮಾರ್ಗಗಳನ್ನು ಹಾಗೂ ಮುನ್ನೆಚ್ಚರಿಕೆ ವಹಿಸಬೇಕಾದಂಥ ಕ್ರಮಗಳ ಕುರಿತು ಆಪ್ತಸಮಾಲೋಚಕರು ಮಾಹಿತಿಯನ್ನು ಒದಗಿಸಿದರು.


ಸುಮಾರು 45ಕ್ಕೂ ಹೆಚ್ಚು ಜನರಿಗೆ ಆರೋಗ್ಯದ ಅರಿವು ಹಾಗೂ ಎಚ್ ಐ ವಿ /ಏಡ್ಸ್, ಅಧಿಕ ರಕ್ತದ ಒತ್ತಡ, ಮಧುಮೇಹ ಹಾಗೂ ಕ್ಷಯ ರೋಗ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.