ಸಮಾಜ ಮುಖಿಯಾಗಿ ಮಾಡುವ ಸಾಧನೆಗಳು ಸದಾಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ : ಸಮಾಜ ಮುಖಿಯಾಗಿ ಮಾಡುವ ಸಾಧನೆಗಳು ಸದಾಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಭಾನುವಾರ ಅಳದಂಗಡಿಯ ದೀಪಾ ಸಭಾಭವನದಲ್ಲಿ ವಿದುಷಿ ವಿದ್ಯಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಳದಂಗಡಿ ಇದರ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದರು.ವಿದ್ಯಾರ್ಜನೆಗೆ ನೀಡುವ ಆರ್ಥಿಕ ಸಹಕಾರ ವಿದ್ಯಾರ್ಥಿಗಳು ಕೊನೆತನಕ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಶುಭ ಲಕ್ಷ್ಮೀ ಸ್ಟೋರ್ಸ್ನ ಮಾಲಕ ಶ್ರೀಧರ ಪೂಜಾರಿ ಅವರು, ಅಕಾಲದಲ್ಲಿ ಮರಣವನ್ನಪ್ಪಿದ ನನ್ನ ಪುತ್ರಿಯ ಕೊನೆಯ ಕೋರಿಕೆಯಂತೆ ಟ್ರಸ್ಟ್ ರಚಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಗಮನವನ್ನು ವಿದ್ಯಾರ್ಜನೆಯತ್ತ ಮಾತ್ರ ಇರುವಂತೆ ನೋಡಿಕೊಂಡರೆ ಮಾತ್ರ ಉತ್ತಮ ಉದ್ಯೋಗ, ವೇತನ ಪಡೆಯಬಹುದು ಎಂದರು.ಅಳದಂಗಡಿ ಶ್ರೀಸತ್ಯದೇವತಾ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ ಅಜಿಲ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ಸುಲ್ಕೇರಿಮೊಗ್ರು ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಧೀರ್ ಸುವರ್ಣ, ಟ್ರಸ್ಟಿ ರೋಶನ್, ಸಭಾಭವನದ ಮಾಲಕ ಪ್ರಭಾಕರ ಶೆಟ್ಟಿ ಇದ್ದರು. ಸುಮಾರು 65 ವಿದ್ಯಾರ್ಥಿಗಳಿಗೆ ಸುಮಾರು 20 ಲಕ್ಷ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ವಿಜಯಕುಮಾರ್ ನಾವರ ಕಾರ್ಯಕ್ರಮ ನಿರ್ವಹಿಸಿದರು.