ಸಾರಾಂಶ
ಗುರುಹಿರಿಯರ ಮಾರ್ಗದರ್ಶನ ಉನ್ನತ ಸಾಧನೆಗೆ ಪ್ರೇರಣೆ ಎಂದು ಗುಲಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು. ಪ್ರೊ. ದಯಾನಂದ ಅಗಸರ ಹೇಳಿದರು. ಗುಲಬರ್ಗ ವಿವಿಯಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನೀಡುತ್ತಿರುವ ಪ್ರೋತ್ಸಾಹದಾಯಕ ಶಿಷ್ಯವೇತನದ ನೆರವಿನಿಂದ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಸಿಗುತ್ತಿದೆ. ಕಲಿಕೆಯ ಹಂತದಲ್ಲಿ ಸ್ವ ಸಾಮರ್ಥ್ಯದೊಂದಿಗೆ ಗುರುಹಿರಿಯರ ಮಾರ್ಗದರ್ಶನ ಪಡೆದರೆ ಉನ್ನತ ಸಾಧನೆಗೆ ಪ್ರೇರಣೆ ಸಿಗಲಿದೆ ಎಂದು ಗುಲಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.ಇಲ್ಲಿನ ಗುಲಬರ್ಗ ವಿಶ್ವ ವಿದ್ಯಾಲಯದಲ್ಲಿರುವ ಅಂಬೇಡ್ಕರ್ ಸಂಭಾಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಗುವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶ ಆಶ್ರಯದಲ್ಲಿ ನಡೆದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಉತ್ತಮ ಗುರಿಯ ಕನಸು ಕಾಣಬೇಕು. ಪೋಷಕರು ಮಕ್ಕಳ ಭವಿಷ್ಯ ರೂಪಿಸಿಲು ಸಮಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು. ಉತ್ತಮ ಸ್ನೇಹಿತರ ಒಡನಾಟ ಬೆಳೆಸಿಕೊಂಡು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಿವಿಧ ವೃತ್ತಿಪರ ಕೋರ್ಸ್ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಷ್ಯವೇತನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯಕವಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎನ್.ಬಾಬಳ ಗಾಂವ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವೃತ್ತಿ ಪರ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ಕಲಬುರಗಿ ಜಿಲ್ಲೆಯ 280 ವಿದ್ಯಾರ್ಥಿಗಳು ಸುಜ್ಞಾನ ನಿಧಿ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ. ಸಾಂಕೇತಿಕವಾಗಿ ಸಂಚಿನ್, ದೀಕ್ಷಾ, ಶಿವಕುಮಾರ್ ಆರ್, ಸಂಧ್ಯಾ, ಶಿಲ್ಪ ಮತ್ತು ಅಭಿಷೇಕ್ಗೆ ಶಿಷ್ಯವೇತನ ಮಂಜೂರಾತಿ ಪತ್ರವನ್ನು ಗಣ್ಯರು ವಿತರಿಸಿದರು.ಧರ್ಮಸ್ಥಳ ಟ್ರಸ್ಟ್ನ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ, ನ್ಯಾಯವಾದಿ ವೈಜಾನಾಥ ಜಳಕಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅನೀಲ ಕುಮಾರ ಡಂಗೆ, ಮಾಲತಿ ರೇಶ್ಮಿ ಇದ್ದರು.
ಜಯಂತ ಪೂಜಾರಿ ಸ್ವಾಗತಿಸಿದರು. ಗಣಪತಿ ಮಾಳಂಜಿ ಅತಿಥಿ ಪರಿಚಯಿಸಿದರು. ಸಂಗೀತ ವಿಭಾಗದ ಅತಿಥಿ ಅಧ್ಯಾಪಕಿ ಡಾ. ಜಯ ದಾನಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಯೋಜನಾಧಿಕಾರಿ ಕಲ್ಲನಗೌಡ ವಂದಿಸಿದರು. ವೀರೇಶ್ ಮತ್ತು ಮಮತಾ ನಿರ್ವಹಿಸಿದರು.