ಸರಳ ವೇಷ ಭೂಷಣದಲ್ಲೂ ನಾಟಕದ ಪ್ರಮುಖ ಪಾತ್ರ ವಿಗಡವಿಕ್ರಮರಾಯ, ರಣದೀರ, ಸೇನಾಧಿಪತಿ, ರಾಜವೈದ್ಯ, ರಾಣಿಯರು, ರಾಜಮಾತೆ, ಸೇವಕರು, ಮಂತ್ರಿಗಳು ಸಖಿಯರು ಪಾತ್ರಗಳಿಗೆ ಜೀವತುಂಬಿದ 25ಕ್ಕೂ ಹೆಚ್ಚುಮಕ್ಕಳು ಪ್ರೇಕ್ಷಕರನ್ನು ಒಂದು ಗಂಟೆಗಳಕಾಲ ಹಿಡಿದಿಡುವ ಮೂಲ ರಂಗಭೂಮಿಯ ಮಹತ್ವ ಎತ್ತಿಹಿಡಿದರು.

ಮೇಲುಕೋಟೆ:

ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ 25ಕ್ಕೂ ಹೆಚ್ಚು ಮಕ್ಕಳು ಅನುಭವಿ ರಂಗ ಕಲಾವಿದರಂತೆ ಐತಿಹಾಸಿಕ ವಿಗಡ ವಿಕ್ರಮರಾಯ ನಾಟಕವನ್ನು ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಮೇಲುಕೋಟೆಯ ಪುತಿನ ಕಲಾ ಮಂದಿರದಲ್ಲಿ ನಶಿಸುತ್ತಿರುವ ರಂಗಭೂಮಿ ಚಟುವಟಿಕೆಗೆ ಶಾಲಾ ಹಂತದಲ್ಲೇ ಪ್ರೋತ್ಸಾಹ ದೊರೆಯಬೇಕು ಎಂಬ ಸಂದೇಶ ಸಾರಿದರು.

ಶತಮಾನದ ಇತಿಹಾಸ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮಕ್ಕಳಿಗೆ 30 ದಿನಗಳ ರಂಗ ತರಬೇತಿ ನೀಡಿ ಈ ವೇಳೆ ಕಲಿತ ನಾಟಕವನ್ನು ಸಮಾರೋಪದ ವೇಳೆ ರಂಗಭೂಮಿಕೆಯಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಗಿತ್ತು.

ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಶಾಲಾ ಮಕ್ಕಳು ಮೈಸೂರು ಸಂಸ್ಥಾನದ ಐತಿಹಾಸಿಕ ಕಥೆಯ ಹಿನ್ನೆಲೆಯಲ್ಲಿ ಸಂಸ ರಚಿಸಿ ಕೆ.ವಿ.ನಾರಾಯಣಮೂರ್ತಿ ರೂಪಾಂತರಿಸಿದ ನಾಟಕವನ್ನು ಸಿಕ್ಕ ಕಡಿಮೆ ಅವಧಿಯಲ್ಲೇ ಕಲಿತ ಮಕ್ಕಳು ಸಂಭಾಷಣೆ ಕೊಂಚವೂ ತಪ್ಪದಂತೆ ಅಚ್ಚುಕಟ್ಟಾಗಿ ಭಾವಾಭಿನಯದ ಮೂಲಕ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದು ಮಕ್ಕಳಿಗೆ ರಂಗಕಲೆಯಲ್ಲಿದ್ದ ಆಸಕ್ತಿ ಎದ್ದು ತೋರುವಂತೆ ಮಾಡಿತ್ತು.

ಮೈಸೂರು ಸಂಸ್ಥಾನದ ಕಾಯೇ ಶ್ರೀಗೌರಿ ಹಾಡಿಗೆ ಮಕ್ಕಳು ಮಾಡಿದ ನೃತ್ಯ ಮನಸೂರೆಗೊಂಡಿತು. ಸರಳ ವೇಷ ಭೂಷಣದಲ್ಲೂ ನಾಟಕದ ಪ್ರಮುಖ ಪಾತ್ರ ವಿಗಡವಿಕ್ರಮರಾಯ, ರಣದೀರ, ಸೇನಾಧಿಪತಿ, ರಾಜವೈದ್ಯ, ರಾಣಿಯರು, ರಾಜಮಾತೆ, ಸೇವಕರು, ಮಂತ್ರಿಗಳು ಸಖಿಯರು ಪಾತ್ರಗಳಿಗೆ ಜೀವತುಂಬಿದ 25ಕ್ಕೂ ಹೆಚ್ಚುಮಕ್ಕಳು ಪ್ರೇಕ್ಷಕರನ್ನು ಒಂದು ಗಂಟೆಗಳಕಾಲ ಹಿಡಿದಿಡುವ ಮೂಲ ರಂಗಭೂಮಿಯ ಮಹತ್ವ ಎತ್ತಿಹಿಡಿದರು.

ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವದ ವೇಳೆಯೂ ಒಂದೊಂದು ನಾಟಕವನ್ನು ಅಭಿನಯಿಸುತ್ತಾ ಬಂದಿರುವ ಮಕ್ಕಳಿಗೆ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಶಿಕ್ಷಕಿ ಬಿ.ಜಯಂತಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ರಾಜ ವಿಕ್ರಮರಾಯ ಕುತಂತ್ರದಿಂದ ಅಸುನೀಗಿ ರಣದೀರ ಪಟ್ಟಕೇರಿದ ಚಿತ್ರಣ ನಿಜವಾದ ರಾಜಪ್ರೇಮಿಗಳು ಗಲ್ಲಿಗೇರಿದ ಚಿತ್ರಣದ ನಾಟಕದ ಕಥಾ ಹಂದರ ಪ್ರೇಕ್ಷಕರ ಮನಮುಟ್ಟಿತು.

ಜೊತೆಗೆ ಶಾಲೆಯ ಹಿರಿಯ ವಿದ್ಯಾರ್ಥಿ ಮನೋಜ್ ಮತ್ತು ದೃಶ್ಯ ಟ್ರಸ್ಟ್‌ನ ಗಿರೀಶ್ ನಾಟಕದ ಆಯ್ಕೆ ಪಾತ್ರ ಹಂಚಿಕೆಯಲ್ಲಿ ಎಚ್ಚರ ವಹಿಸಿ ಮಕ್ಕಳಿಗೆ ರಂಗಕಲೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿ ಯಾವುದೇ ರೀತಿಯಲ್ಲೂ ಸಭಾ ಕಂಪನವಿಲ್ಲದೆ ಪಾತ್ರಾಭಿನಯ ಮಾಡುವಂತೆ ಪ್ರೇರಕ ಶಕ್ತಿಯಾಗಿದ್ದು ಐತಿಹಾಸಿಕ ನಾಟಕ ವಿಗಡವಿಕ್ರಮರಾಯ ಯಶಸ್ವಿ ಪ್ರದರ್ಶನ ಕಾಣುವಂತಾಯಿತು. ಕಲಾವಿದ ಹನುಮಂತುರವರ ಏಕವ್ಯಕ್ತಿ ಸಂಗೀತದ ಹಿನ್ನೆಲೆಯ ನಾಟಕದ ಮಹತ್ವ ಹೆಚ್ಚಿಸಿತ್ತು.