ಸಾರಾಂಶ
ಜನ ಪ್ರತಿನಿಧಿಗಳು ಹಾಗೂ ದಾನಿಗಳು ಕಾಳಜಿವಹಿಸಿ ಸ್ವಯಂ ಸೇವೆ ಮೂಲಕ ಲೇಖನಿ ಸಾಮಗ್ರಿಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಮತ್ತಷ್ಟು ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದು ಕರ್ಲಪರ್ತಿ ಗ್ರಾಪಂ ಸದಸ್ಯೆ ಶಾರದ ಅಭಿಪ್ರಾಯಪಟ್ಟರು.
ಚಿಂತಾಮಣಿ: ಜನ ಪ್ರತಿನಿಧಿಗಳು ಹಾಗೂ ದಾನಿಗಳು ಕಾಳಜಿವಹಿಸಿ ಸ್ವಯಂ ಸೇವೆ ಮೂಲಕ ಲೇಖನಿ ಸಾಮಗ್ರಿಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಮತ್ತಷ್ಟು ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದು ಕರ್ಲಪರ್ತಿ ಗ್ರಾಪಂ ಸದಸ್ಯೆ ಶಾರದ ಅಭಿಪ್ರಾಯಪಟ್ಟರು.
ತಾಲೂಕಿನ ಕದಿರೇನಹಳ್ಳಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಸರಬರಾಜು ಮಾಡಿದ್ದ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಯೋಜನೆಯಡಿಯಲ್ಲಿ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್, ಬಿಸಿಯೂಟ, ಪೂರಕ ಪೌಷ್ಠಿಕ ಆಹಾರ ವಿದ್ಯಾರ್ಥಿ ವೇತನ ಹೀಗೆ ಇನ್ನೂ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಶಾಸಕ ಬಿ.ಎನ್.ರವಿಕುಮಾರ್ ಸೇವೆ ಅನನ್ಯವಾದದ್ದು. ನಾವು ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡಲು ಸಿದ್ಧರಿದ್ದೇವೆಂದರು.ಮುಖ್ಯಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿ, ಶಾಸಕ ಬಿ.ಎನ್.ರವಿಕುಮಾರ್ ಪ್ರತಿವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ನೀಡಿರುವುದು ಅಭಿನಂದನಾರ್ಹ. ಮತ್ತಷ್ಟು ಸ್ವಯಂ ಸೇವಕರು, ಹಳೇ ವಿದ್ಯಾರ್ಥಿಗಳು, ದಾನಿಗಳು ಹಾಗೂ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳ ಬಲವರ್ಧನೆಗೆ ಮತ್ತು ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಸಹಾಯಹಸ್ತ ನೀಡಲೆಂದು ಆಶಿಸಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ವೆಂಕಟೇಶ್, ಶಿಕ್ಷಕ ಬಿ.ಎನ್.ಶ್ರೀನಿವಾಸ್, ಎ.ನಾರಾಯಣಸ್ವಾಮಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.