ಕನ್ನಡಪ್ರಭ ವಾರ್ತೆ ಮಂಡ್ಯ

ಬೇಸಿಗೆ ರಜೆ ಮುಗಿಸಿದ ಮಕ್ಕಳು ಸೋಮವಾರದಿಂದ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಶಿಕ್ಷಕರು ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಅವರನ್ನು ಸ್ವಾಗತಿಸಿದ್ದಾರೆ. ಶಾಲೆಗೆ ಬಂದ ಮಕ್ಕಳನ್ನು ಅದ್ಧೂರಿಯಾಗಿ ಬರಮಾಡಿಕೊಂಡು ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.

ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳನ್ನು ಗಣ್ಯರನ್ನು ಸ್ವಾಗತಿಸುವ ರೀತಿಯಲ್ಲೇ ಗೌರವ ಪೂರ್ವಕವಾಗಿ ಶಾಲೆಗೆ ಕರೆತರಲಾಯಿತು. ಎತ್ತಿನ ಗಾಡಿಗಳು ಹಾಗೂ ಕಾರಿನಲ್ಲಿ ಅದ್ಧೂರಿಯಾಗಿ ಚಿಕ್ಕಮಂಡ್ಯ ವೃತ್ತದಿಂದ ಶಾಲೆಯವರೆಗೆ ಕರೆತರಲಾಯಿತು. ಶಾಲೆಯನ್ನು ತಳಿರು-ತೋರಣ ಕಟ್ಟಿ ಸಿಂಗರಿಸಲಾಗಿತ್ತಲ್ಲದೆ, ದಾರಿಯುದ್ದಕ್ಕೂ ರಂಗೋಲಿಯಿಂದ ಚಿತ್ತಾರ ಮೂಡಿಸಿತ್ತು. ಹೊಸದಾಗಿ ಶಾಲೆಗೆ ಬಂದ ಮಕ್ಕಳನ್ನು ಪೂರ್ಣಕುಂಭದೊಂದಿಗೆ ಹೂಮಳೆಗರೆದು ಸ್ವಾಗತಿಸಲಾಯಿತು. ಮುಖ್ಯ ಶಿಕ್ಷಕ ಹೆಚ್.ಎನ್.ದೇವರಾಜು ನೇತೃತ್ವದಲ್ಲಿ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವಂತೆ ಮಾಡಿ ಸಂಭ್ರಮ-ಸಡಗರದಿಂದ ಶಾಲಾ ಪ್ರಾರಂಭೋತ್ಸವವನ್ನು ನಡೆಸಲಾಯಿತು.

ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮವಿರುವ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಮಕ್ಕಳಿಗೆ ಶಾಲಾ ಶೈಕ್ಷಣಿಕ ಪ್ರವಾಸ, ಕಂಪ್ಯೂಟರ್ ಶಿಕ್ಷಣ, ಉಚಿತ ಪಠ್ಯ ಪುಸ್ತಕ, ಉತ್ತಮ ಬೋಧಕ ವರ್ಗ, ಕ್ರೀಡಾ ತರಬೇತಿ, ಸಿಸಿಟಿವಿ ಕಣ್ಗಾವಲು, ಬಿಸಿಯೂಟದ ವ್ಯವಸ್ಥೆಯೊಂದಿಗೆ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ.

ಶಾಲೆಗೆ ಆಗಮಿಸಿದ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಸುಮಾರು ೨೦೦ಕ್ಕೂ ಹೆಚ್ಚು ಮಕ್ಕಳಿರುವ ಈ ಸರ್ಕಾರಿ ಪ್ರೌಢಶಾಲೆ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಗಳಿಸುತ್ತಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ. ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಉತ್ತಮ ಭವಿಷ್ಯ ರೂಪಿಸುವಂತೆ ಪೋಷಕರಲ್ಲಿ ಶಿಕ್ಷಕರು ಮನವಿ ಮಾಡಿದರು.


ಇದೇ ವೇಳೆ ವಿದ್ಯಾರ್ಥಿನಿ ಧನುಶ್ರೀ ಎಂಬಾಕೆ, ನಾನು ಸರ್ಕಾರಿ ಶಾಲೆಯಲ್ಲೇ ಓದಿ ನಾನು ಸಾಧನೆ ಮಾಡುತ್ತೇನೆ. ಶಾಲೆಯ ಶಿಕ್ಷಕರು ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಖಾಸಗಿ ಶಾಲೆಯನ್ನು ಮೀರಿಸಿದ ಸೌಲಭ್ಯಗಳು ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯಲ್ಲಿವೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದಳು.

ಸಹ ಶಿಕ್ಷಕರಾದ ಪನ್ನಘ, ಶಿಕ್ಷಕರಾದ ಭಾಗ್ಯಮ್ಮ, ಶ್ರೀಧರಮೂರ್ತಿ, ಬಸವರಾಜು, ಅಣ್ಣೇಗೌಡ, ಚಂದನ್, ಯೋಗಮಣಿ, ರವಿಶಂಕರ್, ಹೇಮಲತಾ ಇತರರಿದ್ದರು.