ಸಾರಾಂಶ
ಶಿಕ್ಷಕರ ಕೊರತೆ, ಚಾವಣಿ ಬಿದ್ದ ಶಾಲೆಗಳು, ಶೌಚಾಲಯ ಸಮಸ್ಯೆ ಸೇರಿದಂತೆ ಹಲವು ಕೊರತೆಗಳ ಮಧ್ಯೆ ಜಿಲ್ಲಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29ರಂದು ಪ್ರಾರಂಭವಾಗುತ್ತಿವೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಶಿಕ್ಷಕರ ಕೊರತೆ, ಚಾವಣಿ ಬಿದ್ದ ಶಾಲೆಗಳು, ಶೌಚಾಲಯ ಸಮಸ್ಯೆ ಸೇರಿದಂತೆ ಹಲವು ಕೊರತೆಗಳ ಮಧ್ಯೆ ಜಿಲ್ಲಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29ರಂದು ಪ್ರಾರಂಭವಾಗುತ್ತಿವೆ.
ಪ್ರಾಥಮಿಕ ಶಾಲೆಯಲ್ಲಿ 1874 ಹಾಗೂ ಪ್ರೌಢ ಶಾಲೆಯಲ್ಲಿ 668 ಸೇರಿದಂತೆ 2542 ಶಿಕ್ಷಕರ ಹುದ್ದೆ ಖಾಲಿ ಇದ್ದು, ಕೆಲವೆಡೆ ಏಕೋಪಾಧ್ಯಾಯ ಶಾಲೆಗಳು ಸಹ ಇವೆ. ಕಳೆದ ವರ್ಷ 2.90 ಲಕ್ಷ ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿದ್ದು, 21000ಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪೂರ್ಣಗೊಳಿಸಿ ಹೊರನಡೆದಿದ್ದಾರೆ. ಈ ವರ್ಷ 1ನೇ ತರಗತಿಗೆ ದಾಖಲಾತಿ ನಡೆಯುತ್ತಿದ್ದು ಈ ಬಾರಿ ಸರ್ಕಾರಿ ಮತ್ತು ಖಾಸಗಿ ಶಾಲೆ ಸೇರಿದಂತೆ 1ರಿಂದ 10ನೇ ತರಗತಿ ವರೆಗೆ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು. ಈ ಪೈಕಿ 1.90 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಹಾಗೂ ಉಳಿದವರು ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಶಿಥಿಲಗೊಂಡ ಶಾಲೆ:
ಶಾಲೆ ಕೊಠಡಿ ನಿರ್ಮಿಸಿ 30ರಿಂದ 40 ವರ್ಷ ಆಗಿದ್ದರಿಂದ ಜಿಲ್ಲಾದ್ಯಂತ ಬಹುತೇಕ ಶಾಲೆಗಳು ಶಿಥಿಲಗೊಂಡು ಚಾವಣಿ ಬೀಳುತ್ತಿವೆ. ಹೀಗಾಗಿ, ಶಿಕ್ಷಕರು ಅಂಥ ಕೊಠಡಿಯಲ್ಲಿ ಬೋಧಿಸಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರವೇ 338 ಶಾಲಾ ಕೊಠಡಿ ಶಿಥಿಲಗೊಂಡಿದ್ದು, ₹ 6.22 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ವಾಸ್ತವದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೆ 30 ನೂತನ ಕೊಠಡಿ ನಿರ್ಮಿಸಲು ₹ 4 ಕೋಟಿ ಕೆಕೆಆರ್ಡಿಬಿ ಅಡಿ ಮಂಜೂರಾಗಿದೆ.
ಸಕಲ ಸಿದ್ಧತೆ:
ಮೇ 29ರಂದು ಶಾಲೆ ಆರಂಭವಾಗುವ ಹಿನ್ನೆಲೆ ಜಿಲ್ಲಾದ್ಯಂತ ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಬುಧವಾರವೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೇಸಿಗೆ ರಜೆಯಿಂದ ಧೂಳು ಹಿಡಿದಿದ್ದ ಶಾಲೆ ಹಾಗೂ ಬಿಸಿಯೂಟ ಸಿದ್ಧಪಡಿಸಲು ಸಾಮಗ್ರಿ ಸ್ವಚ್ಛಗೊಳಿಸಿಕೊಳ್ಳಲಾಗಿದೆ. ಶಾಲೆಯ ದ್ವಾರಬಾಗಿಲು, ಕೊಠಡಿಗಳಿಗೆ ತಳಿರು-ತೋರಣವನ್ನು ಶಿಕ್ಷಕರು, ಬಿಸಿಯೂಟ ಕಾರ್ಯಕರ್ತರು ಕಟ್ಟಿದ್ದಾರೆ.
ವಿಶೇಷ ಆಹ್ವಾನ:
ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆ ಶಿಕ್ಷಕರೇ ಖುದ್ದು ಮಕ್ಕಳ ಮನೆಗೆ ಹೋಗಿ ಶಾಲೆಗೆ ಬರುವಂತೆ ಆಹ್ವಾನಿಸಲಿದ್ದಾರೆ. 1ನೇ ತರಗತಿಗೆ ದಾಖಲಾಗುವಂತಹ ಮಕ್ಕಳ ಮನೆಗೆ ತೆರಳಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳಿ ಎಂದು ಆಹ್ವಾನ ನೀಡಿ ಸ್ವಾಗತಿಸಲು ತೀರ್ಮಾನಿಸಿದ್ದಾರೆ.
ಸಿಹಿ ವಿತರಣೆ:
ಶಾಲಾ ಪ್ರಾರಂಭೋತ್ಸವದ ದಿನವಾದ ಗುರುವಾರ ಬಿಸಿಯೂಟದ ಜತೆಗೆ ಆಯಾ ಶಾಲಾ ಹಂತದಲ್ಲಿಯೇ ಸೂಕ್ತವಾಗಿರುವ ಸಿಹಿ ಮಾಡಿಕೊಂಡು, ಮಕ್ಕಳಿಗೆ ನೀಡುವಂತೆ ಸೂಚಿಸಲಾಗಿದೆ.ಅತಿಥಿ ಶಿಕ್ಷಕರ ನೇಮಕ
ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆಯಾಗದಂತೆ ತಕ್ಷಣ ನೇಮಕಕ್ಕೆ ಕ್ರಮಕೈಗೊಳ್ಳಬೇಕೆಂದು ಹೇಳಲಾಗಿದೆ.ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮಕ್ಕಳಿಗೆ ಸಿಹಿ ತಿನಿಸು, ಶಾಲೆಗೆ ತಳಿರು-ತೋರಣ ಕಟ್ಟುವುದು ಶಿಕ್ಷಕರಿಗೆ ಸೂಚಿಸಲಾಗಿದೆ.
ಶ್ರೀಶೈಲ ಬಿರಾದರ ಡಿಡಿಪಿಐ ಕೊಪ್ಪಳ