ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೋಮವಾರದಿಂದ ಶಾಲೆ ಆರಂಭಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

2026-27ನೇ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೋಮವಾರದಿಂದ ಶಾಲೆ ಆರಂಭಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

2026-27ನೇ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಳ್ಳಲಿದೆ. ಶಾಲೆಗೆ ವಿದ್ಯಾರ್ಥಿಗಳ ಆಗಮನಕ್ಕೆ ಬೇಕಾದ ಸಿದ್ಧತೆಯನ್ನು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯಿಂದ ಮಾಡಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಶಾಲೆಗಳಲ್ಲಿ ಪೀಠೋಪಕರಣ ಸರಿಪಡಿಸುವುದು. ಶಾಲಾ ಕೊಠಡಿ ಮತ್ತು ಆವರಣ, ಮೈದಾನ ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಳಿಸಲಾಗಿದ್ದು, ಸೋಮವಾರದಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಲಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಸಹ ಆರಂಭಿಸಲಾಗಿದ್ದು, ಜೂನ್‌ ಅಂತ್ಯದ ವರೆಗೂ ನಡೆಯಲಿದೆ.

ಈಗಾಗಲೇ ಜಿಲ್ಲೆಯ ಎಲ್ಲ ಶಾಲೆಗಳಿಗೆ ಪಠ್ಯಪುಸಕ್ತ ಹಾಗೂ ಸಮವಸ್ತ್ರ ಸರಬರಾಜು ಮಾಡಲಾಗಿದೆ. ಹೊಸ ದಾಗಿ ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ನಂತರ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಚಿಕ್ಕಮಗಳೂರು ಡಿಡಿಪಿಐ ತಿಮ್ಮರಾಜು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 1,888 ಶಾಲೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 1,888 ಶಾಲೆಗಳಿವೆ. ಈ ಪೈಕಿ ಸರ್ಕಾರಿ ಶಾಲೆಗಳ 1,354 ಇದ್ದು, 597 ಪ್ರಾಥಮಿಕ, 641 ಹಿರಿಯ ಪ್ರಾಥಮಿಕ ಹಾಗೂ 116 ಪ್ರೌಢ ಶಾಲೆಗಳಿವೆ. ಸರ್ಕಾರಿ ಶಾಲಾ ಸಿಬ್ಬಂದಿ ಯಾವುದೇ ಕೊರತೆ ಉಂಟಾದಂತೆ ಕ್ರಮ ವಹಿಸುವುದಕ್ಕೆ ಸೂಚಿಸಲಾಗಿದೆ ಎಂದು ತಿಮ್ಮರಾಜು ತಿಳಿಸಿದರು.

--ಬಾಕ್ಸ್‌--

16 ಹೊಸ ಕೆಪಿಎಸ್‌ ಶಾಲೆಜಿಲ್ಲೆಯಲ್ಲಿ ಒಟ್ಟು 16 ಹೊಸ ಕೆಪಿಎಸ್‌ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಕೆಪಿಎಸ್‌ ಶಾಲೆಗಳ ಸಂಖ್ಯೆ 24ಕ್ಕೆ ಹೆಚ್ಚಾಗಲಿದೆ. ಅದರೊಂದಿಗೆ ಜಿಲ್ಲೆಯಲ್ಲಿ ಈಗಾಗಲೇ ಪಿಎಂಶ್ರೀ ಹಾಗೂ 136 ದ್ವಿಭಾಷಾ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈವರ್ಷವೂ ಅಗತ್ಯವಿರುವ ಕಡೆ ದ್ವಿಭಾಷಾ ತರಗತಿ ಆರಂಭಿಸಲಾಗುವುದು ತಿಳಿಸಿದರು.

-ಬಾಕ್ಸ್‌-

ಮಿಂಚಿನ ಸಂಚಾರ

ಸರ್ಕಾರಿ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷವನ್ನು ವಿದ್ಯಾರ್ಥಿ ಸ್ನೇಹಿಯಾಗಿ ಆಚರಣೆ ಮಾಡುವ ಉದ್ದೇಶದಿಂದ ಚಿಕ್ಕಮಗಳೂರು ಶಿಕ್ಷಣ ಇಲಾಖೆ ಮಿಂಚಿನ ಸಂಚಾರ ಮತ್ತು ಶಾಲಾ ಪ್ರಾರಂಭೋತ್ಸವಕ್ಕೆ ವಿಶೇಷ ಕಾರ್ಯತಂತ್ರ ರೂಪಿಸಿಕೊಂಡಿದೆ.

ಇದರಲ್ಲಿ ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿಕೊಳ್ಳುವುದು, ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳುವುದು, ಶಾಲೆಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯದಂತೆ ಕ್ರಮವಹಿಸುವುದು. ಶಾಲಾ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳುವುದು. ಸಮುದಾಯ ಪಾಲ್ಗೊಳ್ಳುವಿಕೆ, ಪೋಷಕರಿಗೆ ಜಾಗೃತಿ ಸೇರಿದಂತೆ ಮೊದಲಾದ ಅಂಶಗಳು ಈ ಕಾರ್ಯತಂತ್ರದಲ್ಲಿದೆ.

-- ಕೋಟ್‌ --

ಶಾಲೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಬಿಇಒಗಳೊಂದಿಗೆ ಸಭೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸಕ್ತ ಸೇರಿದಂತೆ ಎಲ್ಲ ಸೌಲಭ್ಯ ಈಗಾಗಲೇ ಶಾಲೆಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ.

- ತಿಮ್ಮರಾಜು, ಡಿಡಿಪಿಐ, ಚಿಕ್ಕಮಗಳೂರು( ಶಾಲೆಯ ಸೂಕ್ತ ಫೋಟೋ ಬಳಸಿ)