ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಹಳೇಕೋಟೆ ಹೋಬಳಿಯ ಕೆಲವು ಗ್ರಾಮಗಳ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆಯಲ್ಲಿ ಕಂಡುಬರುವ ಬಿಳಿ ಸುಳಿ ರೋಗ ಪೀಡಿತ ಜಮೀನುಗಳಿಗೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಬಿ.ಎನ್. ನೇತೃತ್ವದಲ್ಲಿ ವಿಜ್ಞಾನಿಗಳ ತಂಡದ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ತಾಲೂಕಿನಲ್ಲಿ ಪ್ರಸ್ತುತ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನದಾಗಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ೪೭೪೦ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೧೧೮೦ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಸುಳಿ ಅಥವಾ ಕೇದಿಗೆ ರೋಗ ಹರಡಿದ್ದು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಿಂದ ೩ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡ ತಾಲೂಕಿನ ಬಾಗಿವಾಳು, ಹರದನಹಳ್ಳಿ, ಶಿಗರನಹಳ್ಳಿ, ಹರಿಹರಪುರ ಗ್ರಾಮಗಳಲ್ಲಿ ರೋಗ ಬಂದಿರುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ನೀಡಿದರು.ರೈತರು ಮುಸುಕಿನ ಜೋಳ ಬೆಳೆದ ನಂತರ ಇತರೆ ದ್ವಿದಳ, ಎಣ್ಣೆಕಾಳು ಬೆಳೆಯಬೇಕು, ಬೆಳೆ ಪರಿವರ್ತನೆ ಹಾಗೂ ವೈಜ್ಞಾನಿಕ ಪದ್ಧತಿ ಅಳವಡಿಕೆ, ಮುಂಗಾರಿನಲ್ಲೂ ಮುಸುಕಿನ ಜೋಳದ ಬಿತ್ತನೆಯನ್ನು ಜೂನ್-ಜುಲೈನಲ್ಲಿ ಮಾತ್ರ ಬಿತ್ತನೆ ಮಾಡಬೇಕೆಂದು ವಿಷಯವನ್ನು ಮನಗಂಡು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ರೋಗವನ್ನು ಹತೋಟಿಗೆ ತರಬಹುದೆಂದು ಇಲ್ಲವಾದಲ್ಲಿ ರೋಗದ ಹತೋಟಿ ಕಷ್ಟಸಾಧ್ಯವೆಂದು ತಂಡದ ಸದಸ್ಯರು ರೈತರಿಗೆ ತಿಳಿಸಿದರು.
ಹಾಸನ ಸಹಾಯಕ ಕೃಷಿ ನಿರ್ದೇಶಕ ಮನು ಎಂ.ಡಿ., ವಿಜ್ಞಾನಿಗಳಾದ ಡಾ. ಮಹದೇವು, ಡಾ. ಮಲ್ಲಿಕಾರ್ಜುನ, ಡಾ. ಬಿ ಎಸ್. ಬಸವರಾಜು, ಕೃಷಿ ಅಧಿಕಾರಿಗಳಾದ ಹೇಮಾವತಿ ಹಾಗೂ ಎಂ.ಸಿ. ನವೀನ್ ಕುಮಾರ್ ಮತ್ತು ರೈತರು ಉಪಸ್ಥಿತರಿದ್ದರು.