ಕನ್ನಡಪ್ರಭ ವಾರ್ತೆ ಆಲೂರು

ಭಾರತ್ ಸ್ಕೌಟ್ಸ್ ಗೈಡ್ಸ್ ತಾಲೂಕು, ಜಿಲ್ಲೆ, ರಾಜ್ಯ, ದೇಶಕ್ಕೆ ಮಾತ್ರ ಸೀಮಿತವಾಗದೇ ಜಾಗತಿಕವಾಗಿ ಸಮುದಾಯ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಆಲೂರು ತಾಲೂಕು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಆರ್‌. ವಿಜಯಕುಮಾರ್‌ ಅಭಿಪ್ರಾಯಪಟ್ಟರು.ಅವರು ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ ಮಾಸ್ಟರ್‌, ಗೈಡ್ ಕ್ಯಾಪ್ಟನ್ಸ್ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಮೂಲ ತರಬೇತಿ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಶಿಸ್ತಿನ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸುತ್ತದೆ. ಹಾಸನಾಂಬಾ ಜಾತ್ರೆ ಹಾಗೂ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದಂತಹ ಧಾರ್ಮಿಕ ಉತ್ಸವಗಳಲ್ಲಿ ಸ್ಕೌಟ್ಸ್ ಗೈಡ್ಸ್ ಸಲ್ಲಿಸುವ ನಿಸ್ವಾರ್ಥ ಸೇವೆ ಮಾದರಿಯಾದುದು. ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವುದರ ಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಸ್ಕೌಟ್ಸ್ ಗೈಡ್ಸ್ ಸಹಕಾರಿಯಾಗಿದೆ ಎಂದರು.ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಮಾತನಾಡಿ ಸ್ಕೌಟ್ಸ್, ಗೈಡ್ಸ್ ಜನಮಾನಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ನಿಸ್ವಾರ್ಥ ಸೇವೆ, ಸ್ವಯಂ ಶಿಸ್ತು, ಕ್ರಿಯಾಶೀಲತೆ, ಶಿಷ್ಟಾಚಾರ, ಧಾರ್ಮಿಕ ಸಮನ್ವಯತೆ, ವಿಶ್ವ ಸಹೋದರತೆ, ಹೊಂದಾಣಿಕಾ ಮನೋಧೋರಣೆ ಮುಂತಾದ ಮಹತ್ವದ ಅಂಶಗಳನ್ನು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ. ನಮ್ಮ ತಾಲ್ಲೂಕಿನಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ಅವರ ಮಾರ್ಗದರ್ಶನದಲ್ಲಿ ಬಹುತೇಕ ಶಾಲೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್‌ ಮಾತನಾಡಿ ಇಲಾಖೆಯ ಸಹಕಾರದಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಮಕ್ಕಳ ಅಭ್ಯುದಯಕ್ಕಾಗಿ ಸ್ಥಾಪನೆಯಾಗಿರುವ ಸ್ಕೌಟ್ಸ್ ಗೈಡ್ಸ್ ಚಳವಳಿಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸಹಾಕಾರದಲ್ಲಿ ಇಂದು ನಮ್ಮ ತಾಲೂಕಿನಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಪುರಸ್ಕಾರ್ ಹಾಗೂ ರಾಷ್ಟ್ರಪತಿ ಪುರಸ್ಕಾರ ಉತ್ತೀರ್ಣರಾದ ಮಕ್ಕಳಿಗೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಗೆ ವಿಶೇಷ ಮೀಸಲಾತಿಯನ್ನು ಒದಗಿಸಿರುವುದು ಮಕ್ಕಳಿಗೆ ವರದಾನವಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಶಿಬಿರ ನಾಯಕಿ ಕಾಂತಮಣಿ, ಹಿರಿಯ ಗೈಡರ್ ಎಚ್. ಜಿ. ಕಾಂಚನಮಾಲ, ಏಕಲವ್ಯ ರೋವರ್ ದಳದ ನಾಯಕ ಆರ್‌. ಜಿ. ಗಿರೀಶ್, ಸಹ ನಾಯಕರಾದ ಲೇಡಿ ಸ್ಕೌಟ್ ಮಾಸ್ಟರ್‌ ರೇಣುಕಾ ಮೋಹನ್, ಎಸ್.ವಿ. ಪಬ್ಲಿಕ್ ಶಾಲೆಯ ಹರ್ಷಿತ, ಗೈಡ್ ಕ್ಯಾಪ್ಟನ್ ಅಶ್ವಿನಿ, ಹಿರಿಯ ರೋವರ್‌ ಸಿ. ಬಿ. ಚನ್ನಬಸವೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.