2ನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ಭರಾಟೆ

| Published : Apr 16 2024, 02:09 AM IST / Updated: Apr 16 2024, 06:59 AM IST

election commission

ಸಾರಾಂಶ

ಜೋಶಿ, ಶೆಟ್ಟರ್‌, ಬೊಮ್ಮಾಯಿ ಸೇರಿ 52 ಮಂದಿಯಿಂದ ಉಮೇದುವಾರಿಕೆ ಸಲ್ಲಿಕೆಯಾಗಿದ್ದು, ಗೀತಾ, ಹೆಬ್ಬಾಳ್ಕರ್ ಪುತ್ರ, ಶಾಮನೂರು ಸೊಸೆಯಿಂದಲೂ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

 ಬೆಂಗಳೂರು :  ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಂದುವರೆದಿದ್ದು, ಸೋಮವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಗೀತಾ ಶಿವಕುಮಾರ್‌ ಸೇರಿದಂತೆ 52 ಅಭ್ಯರ್ಥಿಗಳಿಂದ 69 ನಾಮಪತ್ರಗಳು ಸಲ್ಲಿಕೆಯಾಗಿವೆ. 2ನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗಿನಿಂದ ಈವರೆಗೆ 88 ಅಭ್ಯರ್ಥಿಗಳಿಂದ 126 ಉಮೇದುವಾರಿಕೆ ಸಲ್ಲಿಕೆಯಾದಂತಾಗಿದೆ.

ಅಭ್ಯರ್ಥಿಗಳು ತಮ್ಮ ಪಕ್ಷಗಳ ಮುಖಂಡರ ಜತೆ ರ್‍ಯಾಲಿಗಳ ಮೂಲಕ ಬಂದು ಉಮೇದುವಾರಿಕೆ ಸಲ್ಲಿಸಿದರು. ಹಲವೆಡೆ ಬೃಹತ್‌ ಸಮಾವೇಶದ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಧಾರವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆ, ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್, ಕಾಂಗ್ರೆಸ್‌ನಿಂದ ಮೃಣಾಲ್‌ ಹೆಬ್ಬಾಳ್ಕರ್, ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್‌, ಹಾವೇರಿಯಲ್ಲಿ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ್‌, ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್‌, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್‌, ರಾಯಚೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜಾ ಅಮರೇಶ್ವರ್ ನಾಯಕ್, ಕಾಂಗ್ರೆಸ್‌ನಿಂದ ದೇವಣ್ಣ ನಾಯಕ್ ಸೇರಿದಂತೆ 14 ಕ್ಷೇತ್ರದಲ್ಲಿ ಹಲವರು ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ 52 ಅಭ್ಯರ್ಥಿಗಳ ಪೈಕಿ 45 ಪುರುಷರು, 7 ಮಹಿಳೆಯರಾಗಿದ್ದು, 69 ಉಮೇದುವಾರಿಕೆಗಳಲ್ಲಿ 59 ಪುರುಷರ ನಾಮಪತ್ರಗಳಾಗಿದ್ದು, 10 ಮಹಿಳೆಯರದ್ದಾಗಿದೆ. ಈವರೆಗೆ ನಾಮಪತ್ರ ಸಲ್ಲಿಕೆ ಮಾಡಿದ ಒಟ್ಟು 88 ಅಭ್ಯರ್ಥಿಗಳಲ್ಲಿ 78 ಪುರುಷರು, 10 ಮಹಿಳೆಯರಾಗಿದ್ದಾರೆ. ಅಂತೆಯೇ 126 ನಾಮಪತ್ರಗಳಲ್ಲಿ 110 ಪುರುಷರು, 16 ಮಹಿಳೆಯರ ನಾಮಪತ್ರಗಳಾಗಿವೆ. ಬಿಜೆಪಿಯಿಂದ 21, ಕಾಂಗ್ರೆಸ್‌ನಿಂದ 26, ಬಿಎಸ್‌ಪಿ 4, ಎಎಪಿ 1, ಜೆಡಿಎಸ್‌ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳಿಂದ 41, ಪಕ್ಷೇತರರಿಂದ 32 ನಾಮಪತ್ರ ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಕೆಗೆ ಏ.19 ಕಡೆಯ ದಿನವಾಗಿದ್ದು, 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7 ರಂದು ಮತದಾನ ನಡೆಯಲಿದೆ.