ಸಾರಾಂಶ
ಹೊಡೆಯುತ್ತಿದ್ದ ವೇಳೆ ಕೋಲು ಮುರಿದರೂ ಕೂಡ ಲೆಕ್ಕಿಸದೇ ಥಳಿಸಿದ್ದಾರೆ. ಈ ವೇಳೆ ಯುವಕ ಕಣ್ಣೀರಿಡುತ್ತಾ ಬೇಡಿಕೊಂಡರೂ ಸೆಕ್ಯೂರಿಟಿ ಗಾರ್ಡ್ಗಳ ಮನಸ್ಸು ಕರಗಲಿಲ್ಲ.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ಮಾಡಿರುವುದಾಗಿ ಯುವಕನೋರ್ವನಿಗೆ ಮನಸ್ಸೋ ಇಚ್ಛೆ ಥಳಿಸಲಾಗಿದ್ದು, ಈ ವೇಳೆ ಯುವಕ ಕಣ್ಣೀರಿಡುತ್ತಾ ಕಾಲಿಗೆ ಬಿದ್ದು ಬೇಡಿಕೊಂಡರೂ ಪೊಲೀಸರಿಗೆ ಒಪ್ಪಿಸದೆ ಸೆಕ್ಯೂರಿಟಿಗಳೇ ತಮ್ಮ ಕ್ರೌರ್ಯ ಮೆರೆದಿರುವ ಅಮಾನವೀಯ ಘಟನೆ ನಡೆದಿದೆ.ಮೊಬೈಲ್ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಲೂರು ಮೂಲದ ಯುವಕ ಸಿಕ್ಕಿ ಬಿದ್ದವನು. ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆತನನ್ನು ಹಿಡಿದ ಸೆಕ್ಯೂರಿಟಿ ಗಾರ್ಡ್ಗಳು ಹಾಗೂ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಮನಬಂದಂತೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಹೊಡೆಯುತ್ತಿದ್ದ ವೇಳೆ ಕೋಲು ಮುರಿದರೂ ಕೂಡ ಲೆಕ್ಕಿಸದೇ ಥಳಿಸಿದ್ದಾರೆ. ಈ ವೇಳೆ ಯುವಕ ಕಣ್ಣೀರಿಡುತ್ತಾ ಬೇಡಿಕೊಂಡರೂ ಸೆಕ್ಯೂರಿಟಿ ಗಾರ್ಡ್ಗಳ ಮನಸ್ಸು ಕರಗಲಿಲ್ಲ. ಸೆಕ್ಯೂರಿಟಿ ಸಿಬ್ಬಂದಿ ಡಿಟೆಕ್ಟ್ವೆಲ್ ಸೆಕ್ಯೂರಿಟಿ ಏಜೆನ್ಸಿಗೆ ಸೇರಿದ್ದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಹಾಸನ ನಗರ ಠಾಣಾ ಪೊಲೀಸರು ತಪ್ಪಿತಸ್ಥರ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ.