ಧಾರಾಕಾರ ಮಳೆಗೆ ಕೊಚ್ಚಿಹೋದ ಮೊಳಕೆ

| Published : Jun 13 2025, 01:07 AM IST

ಸಾರಾಂಶ

ಬುಧವಾರ ರಾತ್ರಿಯಿಡಿ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆ ಹಲವಾರು ಆವಾಂತರ ಸೃಷ್ಟಿಸಿದೆ. ರಭಸದ ಮಳೆಗೆ ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡು ಎತ್ತ ನೋಡಿದರತ್ತ ನೀರೇ ಕಂಡುಬರುತ್ತಿತ್ತು. ತಾಲೂಕಿನ ಸಿಕ್ಕೇರಿ ಗ್ರಾಮದಲ್ಲಿ ಸುರಿದ ಮಳೆಯಿಂದ ರೈತರು ಬಿತ್ತನೆ ಮಾಡಿದ್ದ ಜೋಳ, ಗೋವಿನ ಜೋಳ, ಈರುಳ್ಳಿ ಮೊಳಕೆಗಳು ಕೊಚ್ಚಿ ಹೋಗಿವೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬುಧವಾರ ರಾತ್ರಿಯಿಡಿ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆ ಹಲವಾರು ಆವಾಂತರ ಸೃಷ್ಟಿಸಿದೆ. ರಭಸದ ಮಳೆಗೆ ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡು ಎತ್ತ ನೋಡಿದರತ್ತ ನೀರೇ ಕಂಡುಬರುತ್ತಿತ್ತು. ತಾಲೂಕಿನ ಸಿಕ್ಕೇರಿ ಗ್ರಾಮದಲ್ಲಿ ಸುರಿದ ಮಳೆಯಿಂದ ರೈತರು ಬಿತ್ತನೆ ಮಾಡಿದ್ದ ಜೋಳ, ಗೋವಿನ ಜೋಳ, ಈರುಳ್ಳಿ ಮೊಳಕೆಗಳು ಕೊಚ್ಚಿ ಹೋಗಿವೆ. ಮತ್ತೊಂದೆಡೆ ಹಳ್ಳಕೊಳ್ಳ, ರಸ್ತೆಗಳು, ಗಟಾರುಗಳು ತುಂಬಿ ಹರಿದಿದ್ದರಿಂದ ಅನೇಕ ಕಡೆ ಜಮೀನು ಹಾಗೂ ಸಂಪರ್ಕ ರಸ್ತೆಗಳು ಕೊಚ್ಚಿಹೋಗಿವೆ. ಗಿಡಮರಗಳು ಬಿದ್ದಿವೆ.

ಬೆಣ್ಣೆಹಳ್ಳ ಉಕ್ಕಿ ಹರಿದಿದ್ದರಿಂದ ಗುಳೇದಗುಡ್ಡ ಪಟ್ಟಣದ ಪರ್ವತಿ ಸೇತುವೆ ಹಾಗೂ ಆಸಂಗಿ ಗ್ರಾಮಕ್ಕೆ ತೆರಳುವ ಸೇತುವೆಗಳು ಸಂಪೂರ್ಣ ಜಲಾವೃತಗೊಂಡು ರಸ್ತೆ ದಾಟಲು ಸ್ಥಳೀಯರು ಹರಸಾಹ ಪಡುವಂತಾಗಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಲ್ಲೇ ಸೈಕಲ್‌, ದ್ವಿಚಕ್ರವಾಹನ ಹಾಗೂ ಕಾಲ್ನಡಿಗೆ ಮೂಲಕ ದಾಟುವ ಹುಚ್ಚು ಸಾಹಸ ಮಾಡುತ್ತಿರುವುದು ಆತಂಕ ಸೃಷ್ಟಿಸಿದೆ. ಬಾಗಲಕೋಟೆ ನಗರದ ವಿದ್ಯಾಗಿರಿ ಮತ್ತು ನವನಗರದ ಜಿಲ್ಲಾಸ್ಪತ್ರೆಯ ಬಳಿ ಬೃಹತ್ ಮರಗಳು ನೆಲಕ್ಕುರುಳಿದೆ. ಈ ವೇಳೆ ಮರದ ಬಳಿ ನಿಲ್ಲಿಸಿದ್ದ ಕಾರುಗಳು ಹಾಗೂ ಬೈಕ್ ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.