ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ನಿವೇಶನ ಅಥವಾ ವಸತಿ ಇಲ್ಲದಿರುವ ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ವಸತಿ/ನಿವೇಶನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಪಾರದರ್ಶಕವಾಗಿ ನಿವೇಶನಗಳನ್ನು ನಿವೇಶನ ರಹಿತರಿಗೇ ನೀಡುವ ಉದ್ದೇಶದಿಂದ ಗ್ರಾಮಸಭೆಗಳಲ್ಲಿ ಖುದ್ದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಿ ವರದಿ ಸಲ್ಲಿಸಲು 154 ಗ್ರಾಮ ಪಂಚಾಯ್ತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಈ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಪಟ್ಟ ಗ್ರಾಮಸಭೆಗೆ ಹಾಜರಾಗಿ ಸರ್ಕಾರದ ನಿಯಮಾವಳಿ ರೀತ್ಯ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಸಂಬಂಧಪಟ್ಟ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸಹ ಕಡ್ಡಾಯವಾಗಿ ಗ್ರಾಮಸಭೆಗಳಿಗೆ ಹಾಜರಾಗಿ ನಿವೇಶನ ರಹಿತರನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಸಂದರ್ಭದಲ್ಲಿ ಸರ್ಕಾರ ನೀಡಿರುವ ಮಾನದಂಡ ಪಾಲಿಸಬೇಕು. 2018ರಲ್ಲಿ ಸಮೀಕ್ಷೆ ಮಾಡಿ ಪಟ್ಟಿ ಮಾಡಿರುವ ಪಟ್ಟಿಯಲ್ಲಿ ಇರುವ ನಿವೇಶನರಹಿತರಿಗೆ ಆದ್ಯತೆ ನೀಡಬೇಕು. ಪಟ್ಟಿಯಲ್ಲಿ ಇರುವವರ ಹೆಸರಲ್ಲಿ ನಿವೇಶನ/ವಸತಿ ಇದೆಯೇ, ಇಲ್ಲವೇ ಎನ್ನುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷೇತ್ರ ವೀಕ್ಷಣೆ ಮಾಡಿ ಖಚಿತ ಪಡಿಸಿಕೊಳ್ಳಬೇಕು. ನಿವೇಶನ ಇಲ್ಲದವರಿಗೆ ವಸತಿ ರಹಿತರೆಂದು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ದೃಢೀಕರಣ ಪತ್ರ ನೀಡಬೇಕು. ಅಂತಹವರಿಗೆ ನಿವೇಶನ ಸಿಗಬೇಕು ಎಂದು ಸೂಚನೆ ನೀಡಿದರು.ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗ್ರಾಮಸಭೆಯಲ್ಲಿ ಕೋರಂ ಇರಬೇಕು. ಕನಿಷ್ಠ 100 ಜನ ಗ್ರಾಮವಾಸಿ ಮತದಾರರು ಇರಬೇಕು. ಜೀತ ವಿಮುಕ್ತರಿಗೆ, ಮಹಿಳಾ ಫಲಾನುಭವಿಗಳಿಗೆ, ಅಂಗವಿಕಲರಿಗೆ, ಮಾಜಿ ಸೈನಿಕರಿಗೆ ಆದ್ಯತೆ ನೀಡಿ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಯೋಜನಾ ನಿರ್ದೇಶಕ ಮಂಜುನಾಥ, ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ನೋಡಲ್ ಅಧಿಕಾರಿಗಳು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಸಿಕೆಬಿ-4ವಸತಿ/ನಿವೇಶನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿದರು.