ಸಾರಾಂಶ
ರಂಭಾಪುರಿ ಪೀಠದಲ್ಲಿ ಗುರು ಪೌರ್ಣಿಮೆ ಧರ್ಮ ಸಮಾರಂಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಕಲ ಜೀವ ರಾಶಿಗಳಿಗೆ ಒಳಿತನ್ನೇ ಬಯಸುವ ಶ್ರೀ ಗುರು ಕರುಣಾಸಾಗರ. ಶ್ರೀ ಗುರು ಅನಂತ ಅರಿವಿನ ಚೈತನ್ಯ ಮೂರ್ತಿ. ಗುರು ಕರುಣೆಯಿಂದ ಸೌಭಾಗ್ಯ ಸಂಪತ್ತು ಪ್ರಾಪ್ತಿ. ಗುರು ಕರುಣೆಯಿಂದ ಶಿಷ್ಯನಿಗೆ ಆತ್ಮ ಸಾಕ್ಷಾತ್ಕಾರ ದೊರಕುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಗುರು ಪೌರ್ಣಿಮೆ ಅಂಗವಾಗಿ ಭಾನುವಾರ ಸಂಯೋಜಿಸಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗುರು ಆಧ್ಯಾತ್ಮ ಲೋಕದ ಚಕ್ರವರ್ತಿ. ಕಾಲದಿಂದ ಅವಿಚ್ಛೇದನವಾಗದ ತತ್ವ ಜ್ಞಾನ ವುಳ್ಳವನೇ ಪರಮ ಗುರು. ಶ್ರೀ ಗುರುವಿನ ಸ್ಥಾನಮಾನ ಎಂದೆಂದಿಗೂ ಮರೆಯಲಾಗದು. ಸತ್ಯಾನುಭೂತಿಗಾಗಿ ಸಮಸ್ತ ಜಗದಲ್ಲಿ ಸಂಚರಿಸಿ ಬಂದವ ನಿಜವಾದ ಗುರು. ಭೌತಿಕ ಸಂಬಂಧಗಳು ನಾಶಗೊಂಡರೂ ಸಹ ಗುರು ಶಿಷ್ಯರ ಸಂಬಂಧ ಯಾವಾಗಲೂ ಶಾಶ್ವತ. ಗುರುವಿಲ್ಲದ-ಗುರಿಯಿಲ್ಲದ ಮಾನವ ಜೀವನ ಶ್ರೇಯಸ್ಸು ಕಾಣಲು ಸಾಧ್ಯವಾಗದು.ಪರಶಿವನ ಸಾಕಾರ ಇನ್ನೊಂದು ರೂಪವೇ ಶ್ರೀಗುರು. ಅಂತರಂಗ ಬಹಿರಂಗ ಶುದ್ಧಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ ಹೊರತು ಬೇರಾರಿಗಿಲ್ಲ. ವೀರಶೈವ ಧರ್ಮ ಮೊದಲ್ಗೊಂಡು ಎಲ್ಲಾ ಧರ್ಮಗಳಲ್ಲಿ ಶ್ರೀ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿ ಕೊಟ್ಟಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಂತರಂಗದ ಕತ್ತಲೆ ಕಳೆಯಲು ಗುರು ಬೇಕೇ ಬೇಕು ಎಂದು ತಿಳಿಸಿದರು.ಗುರು ಪೌರ್ಣಿಮೆ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಭಕ್ತರು ಪಾದ ಪೂಜೆ ನಡೆಸಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.ಮಳಲಿ ಮಠದ ಡಾ. ನಾಗಭೂಷಣ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು, ಮಳಖೇಡ ಅಭಿನವ ಕಾರ್ತಿಕೇಶ್ವರ ಶ್ರೀಗಳು, ಗುಂಡೆಪಲ್ಲಿ ಶಿವಸಿದ್ಧ ಸೋಮೇಶ್ವರ ಶ್ರೀಗಳು, ಬೇರುಗಂಡಿ ರೇಣುಕ ಮಹಾಂತ ಶ್ರೀಗಳು, ರಟ್ಟಿಹಳ್ಳಿ ವಿಶ್ವೇಶ್ವರ ದೇವರು, ರೇವತಗಾಂವ ವಿಶ್ವನಾಥ ಪವಿತ್ರ ಸಮಾರಂಭದಲ್ಲಿ ಪಾಲ್ಗೊಂಡು ಗುರು ಹಿರಿಮೆ ಕುರಿತು ಮಾತನಾಡಿದರು. ಬೆಂಗಳೂರಿನ ಉದಯ, ಬ್ಯಾಡಗಿ ರವೀಂದ್ರ, ಸೊಲ್ಲಾಪುರ ರಾಜು ಚಡಚಣಕರ, ನಾಂದೇಡ ವಿನಾಯಕ, ಚಿಕ್ಕಮಗಳೂರಿನ ಉಪ್ಪಳ್ಳಿ ಬಸವರಾಜ, ದೇವರಾಜು ಸೇರಿದಂತೆ ಹಲವಾರು ಗಣ್ಯರು, ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರು ವೇದಘೋಷ ಮಾಡಿದರು. ಉಟಗಿ ಹಿರೇಮಠದ ಶಿವಪ್ರಸಾದ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿಸಲಾಯಿತು. ಪ್ರಾತಃ ಕಾಲದಲ್ಲಿ ಗುರು ಪೌರ್ಣಿಮೆ ಅಂಗವಾಗಿ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಯಿತು. ೨೧ಬಿಹೆಚ್ಆರ್ ೪:
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಗುರು ಪೌರ್ಣಿಮೆ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಭಕ್ತಾಭಿಮಾನಿಗಳು ಪಾದ ಪೂಜೆ ನಡೆಸಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.