ಸಾರಾಂಶ
ಎರಡು ಪ್ರತ್ಯೇಕ ಘಟನೆಗಳಲ್ಲಿ ಅಪಾಯದಿಂದ ಪಾರಾದ ಈ ಪ್ರವಾಸಿಗರನ್ನು ಬೆಂಗಳೂರಿನ ನಾಲ್ವರು ಮತ್ತು ಗೋವಾದ ಒಬ್ಬ ಮಹಿಳೆ ಎಂದು ಗುರುತಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಪ್ರಸಿದ್ಧ ಪ್ರವಾಸಿತಾಣ ಮರವಂತೆ ಬೀಚ್ನಲ್ಲಿ ಸಮುದ್ರ ಪಾಲಾಗುತ್ತಿದ್ದ 5 ಮಂದಿ ಪ್ರವಾಸಿಗರನ್ನು ಬೀಚ್ ಜೀವ ರಕ್ಷಕರು ಭಾನುವಾರ ಸಕಾಲದಲ್ಲಿ ರಕ್ಷಿಸಿದ್ದಾರೆ.ಎರಡು ಪ್ರತ್ಯೇಕ ಘಟನೆಗಳಲ್ಲಿ ಅಪಾಯದಿಂದ ಪಾರಾದ ಈ ಪ್ರವಾಸಿಗರನ್ನು ಬೆಂಗಳೂರಿನ ನಾಲ್ವರು ಮತ್ತು ಗೋವಾದ ಒಬ್ಬ ಮಹಿಳೆ ಎಂದು ಗುರುತಿಸಲಾಗಿದೆ.ಈ ಪ್ರವಾಸಿಗರು ಭಾನುವಾರ ಮರವಂತೆ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು. ಇತ್ತೀಚೆಗೆ ಸರ್ವೆ ಸಾಮಾನ್ಯವಾಗಿರುವ ಸೆಲ್ಫಿಗಾಗಿ, ಸಮುದ್ರ ತೀರದಲ್ಲಿ ಕಡಲುಕೊರತೆ ತಪ್ಪಿಸಲು ಹಾಕಿರುವ ಕಲ್ಲುಗಳ ಮೇಲೆ ಹೋಗಿದ್ದರು. ಮಳೆಗಾಲವಾದ್ದರಿಂದ ಹುಚ್ಚೆದ್ದು ಭೋರ್ಗೆರೆಯುತ್ತಿರುವ ಸಮುದ್ರದ ಅಲೆಗಳು ಬಂಡೆಕಲ್ಲುಗಳಿಗೆ ಬಡಿದು ಸೆಲ್ಫಿಯ ಗೀಳಿನಲ್ಲಿ ಮುಳುಗಿದ್ದ ಈ ಪ್ರವಾಸಿಗರು ಆಯಾ ತಪ್ಪಿ ನೀರಿಗೆ ಬಿದ್ದು ಕೊಚ್ಚಿ ಹೋಗಲಾರಂಭಿಸಿದರು.
ಸಾಕಷ್ಟು ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದ ಇಂತಹ ಪ್ರವಾಸಿಗರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತಿದ್ದ ಲೈಫ್ ಗಾರ್ಡ್ ಗಳು ತಕ್ಷಣ ಧಾವಿಸಿ ಕೊಚ್ಚಿಕೊಂಡು ಹೋಗುತ್ತಿದ್ದ ಪ್ರವಾಸಿರಗನ್ನು ಮೇಲೆಳೆದು ತಂದು ರಕ್ಷಿಸಿದ್ದಾರೆ.ಐವರಿಗೆ ಜೀವದಾನ ಮಾಡಿದ ಲೈಫ್ ಗಾರ್ಡ್ ಗಳಾದ ಪೃಥ್ವಿರಾಜ್ ಉಪ್ಪುಂದ, ಪ್ರಮೋದ್ ರಾಜ್ ಉಪ್ಪಂದ, ಬೀಚ್ ಉಸ್ತುವಾರಿ ಸುರೇಶ್ ಕೊಡೇರಿ ಹಾಗೂ ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ ಅವರ ಸಾಹಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.ಮಳೆಗಾಲದಲ್ಲಿ ಉಡುಪಿಯ ಮಲ್ಪೆ ಸಮುದ್ರ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಇರುವ ಹಿನ್ನಲೆಯಲ್ಲಿ ಹೊರಜಿಲ್ಲೆ - ರಾಜ್ಯಗಳಿಂದ ಬರುವ ಪ್ರವಾಸಿಗರು ಮರವಂತೆ ಬೀಚ್ಗೆ ಬಂದು ಇಂತಹ ಹುಚ್ಚಾಟಗಳನ್ನು ನಡೆಸುತಿದ್ದಾರೆ. ಕಳೆದ ಮಳೆಗಾಲದಲ್ಲಿ ಇಲ್ಲಿ ಅನೇಕ ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ. ಆದ್ದರಿಂದ ಇಲ್ಲಿಯೂ ಪ್ರವಾಸಿಗರ ಮೇಲೆ ನಿರ್ಬಂಧ ಹೇರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ