ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬ್ರಿಟಿಷರ ವಿರುದ್ಧ ಮೊದಲ ವಿಜಯ ಸಾಧಿಸಿದ್ದ ಕಿತ್ತೂರು ರಾಣಿ ಚನ್ನಮ್ಮಾಜೀ ಎರಡನೇ ಬಾರಿಯ ಯುದ್ಧದಲ್ಲಿ ಗೆಲುವು ಸಾಧಿಸಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು. ನಮ್ಮವರೇ ಆದ ಸ್ವಾರ್ಥಿಗಳ ಕುತಂತ್ರದಿಂದ ಚನ್ನಮ್ಮಾಜೀ ಪರಾಭಾವಗೊಂಡಳು. ಇಂತಹ ಸ್ವಾರ್ಥಿಗಳಿಂದಲೇ ದೇಶಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆರ್ಎಸ್ಎಸ್ ಬೆಳಗಾವಿ ವಿಭಾಗದ ಕಾರ್ಯವಾಹ ರಾಮಚಂದ್ರ ಏಡಕೆ ಹೇಳಿದರು.ಪಟ್ಟಣದಲ್ಲಿ ವಿಜಯದಶಮಿ ಉತ್ಸವ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಭಾನುವಾರ ಆಕರ್ಷಕ ಪಥಸಂಚಲನದ ಬಳಿಕ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಆವರಣದಲ್ಲಿ ನಡೆದ ಬೌದ್ಧಿಕ ಸಮಾರಂಭ ಉದ್ದೇಶಿಸಿ ಮಾತನಾಡಿ, ಸ್ವಾರ್ಥಿಗಳಿಗೆ ಮನೆ ಹಾಕುವುದನ್ನು ನಿಲ್ಲಿಸಿ, ಜಾತಿ, ಮತ, ಪಂಥಗಳ ಭೇದಭಾವ ತೊರೆದು ಪ್ರಾಮಾಣಿಕತೆ, ಸೌಹಾರ್ದತೆಯ ಬದುಕು ಸಾಗಿಸಿದರೆ ದೇಶ ಅಭಿವೃದ್ಧಿಯಾಗಲಿದೆ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ಆರ್ಎಸ್ಎಸ್ ಸಂಘಟನೆಯ ಮೂಲ ಧ್ಯೇಯವಾಗಿದೆ ಎಂದು ಹೇಳಿದರು.
ಆರ್ಎಸ್ಎಸ್ ಸಂಘಟನೆಯ ಧ್ಯೇಯೋದ್ದೇಶ ಸಹಿಸದ ಕೆಲ ಕುತಂತ್ರಿಗಳು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಸೇವಕರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ದೇಶಕ್ಕಾಗಿ ಸಂಘದ ತತ್ವಗಳನ್ನು ಪಾಲಿಸಿ ಸೇವೆ ಸಲ್ಲಿಸಬೇಕೆಂದ ಅವರು, ಸಂವಿಧಾನಕ್ಕೆ ಎಲ್ಲರೂ ಗೌರವ ಕೊಡಬೇಕು. ಪ್ರಜಾಪ್ರಭುತ್ವ ಉಳಿಯಬೇಕು. ದೇಶದ ಅಳಿವು, ಉಳಿವು ಸಂವಿಧಾನದಲ್ಲಿ ಅಡಗಿದೆ. ಎಲ್ಲ ಜಾತಿಯವರನ್ನು ಗೌರವಯುತವಾಗಿ ಕಾಣಬೇಕು ಎಂದು ಹೇಳಿದರು.ಪೈಲೆಟ್ ಅಕ್ಷಯ ಪಾಟೀಲ ಮಾತನಾಡಿ, ಬೈಲಹೊಂಗಲ ನಾಡು ವೀರರ, ಶೂರರ ನಾಡಾಗಿದ್ದು, ಈ ಭೂಮಿಯಲ್ಲಿ ಹುಟ್ಟಿರುವುದು ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ. ಆರ್ಎಸ್ಎಸ್ ಸಂಘಟನೆ ಅನೇಕ ಮಹನೀಯರನ್ನು ದೇಶಕ್ಕೆ ಕೊಡುಗೆನೀಡಿದ್ದು, ನಿಸ್ವಾರ್ಥದ ದೇಶಭಕ್ತಿ ಹೊಂದಿದ ಇಂತಹ ಸಂಘಟನೆಯಲ್ಲಿ ಎಲ್ಲರೂ ಬೆರೆತು ಸಂಘದ ತತ್ವಗಳನ್ನು ಪಾಲಿಸಬೇಕೆಂದರು.ಆಕರ್ಷಕ ಪಥಸಂಚಲನ:
ಸಮಾರಂಭಕ್ಕೂ ಮುನ್ನ ಸಂಘದ ಗಣವೇಷಧಾರಿಗಳಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಕಿತ್ತೂರು ರಾಣಿ ಚನ್ನಮ್ಮ ಮುಖ್ಯ ದ್ವಾರದಿಂದ ಆರಂಭಗೊಂಡ ಪಥಸಂಚಲನ ರಾಯಣ್ಣ ವೃತ್ತ, ಬಜಾರ ರಸ್ತೆ, ಜವಳಿ ಕೂಟ, ಗೊಂಬಿ ಗುಡಿ, ಬೆಲ್ಲದ ಕೂಟ, ಉಪ್ಪಿನ ಕೂಟ, ಹೊಸೂರ ಗಲ್ಲಿ, ಇಂಚಲ ಗಲ್ಲಿ, ಮಾರುತಿ ದೇವಸ್ಥಾನ, ಇಂಚಲ ಕ್ರಾಸ್, ಕೇಂದ್ರ ಬಸ್ ನಿಲ್ದಾಣ, ಸೋಮವಾರ ಪೇಟೆ, ಗಣಪತಿ ದೇವಸ್ಥಾನ, ದೀಪಾ ಹೋಟೆಲ್ ಮಾರ್ಗವಾಗಿ ಸಂಚರಿಸಿ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನಕ್ಕೆ ತಲುಪಿತು.ಮಾರ್ಗದುದ್ದಕ್ಕೂ ಸ್ವಯಂ ಸೇವಕರು ಶಿಸ್ತುಬದ್ಧ ಪಥಸಂಚಲನ ನೋಡುಗರ ಮನ ಸೆಳೆಯಿತು. ರಸ್ತೆಗಳ ಅಕ್ಕಪಕ್ಕ ತಿರುವು, ವೃತ್ತ, ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಜನರು ಪುಷ್ಪವೃಷ್ಟಿಗೈದು ಭಾರತ ಮಾತಾಕೀ ಜಯಘೋಷಣೆ ಕೂಗಿದರು. ರಾಯಣ್ಣ ವೃತ್ತದಲ್ಲಿ ಸ್ವಾಭಿಮಾನ ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರು ಹಾಗೂ ಧರ್ಮದರ್ಶಿ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಜೆಸಿಬಿ ಮೇಲೆ ನಿಂತು ಪಥಸಂಚಲನ ಮೇಲೆ ಪುಷ್ಪವೃಷ್ಟಿ ಮಾಡಿದರು. ಪಥ ಸಂಚಲನ ಸಾಗುವ ಮಾರ್ಗಗಳಲ್ಲಿ ಕೇಸರಿ ಬಣ್ಣದ ಹಾಳೆಗಳಿಂದ ಶೃಂಗರಿಸಿ ತಳಿರು ತೋರಣ, ರಂಗೋಲಿ ಹಾಕಿ ಅಲಂಕಾರಗೊಳಿಸಲಾಗಿತ್ತು. ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಮಹಾನ್ ಸ್ವಾತಂತ್ರ್ಯ ಯೋಧರನ್ನು ಜೊತೆಯಲ್ಲಿದ್ದ ಸ್ವಾರ್ಥಿಗಳೇ ಬ್ರಿಟಿಷರಿಗೆ ಹಿಡಿದುಕೊಟ್ಟರು. ಭಾರತಾಂಬೆಯ ಮಣ್ಣಿನಲ್ಲಿ ಜನಿಸಿ, ಇಲ್ಲಿನ ಅನ್ನ ಉಂಡು ದೇಶಕ್ಕೆ ದ್ರೋಹ ಬಗೆಯುವವರನ್ನು ಎಂದಿಗೂ ನಂಬಬೇಡಿ. ಅಂತವರಿಗೆ ತಕ್ಕ ಪಾಠ ಕಲಿಸಲು ಸಂಘಟಿತರಾಗಿ ಹೋರಾಟ ಮಾಡಬೇಕು. ಸುಮ್ಮನೆ ಇದ್ದರೆ ನಮ್ಮ ಮನೆಯನ್ನೇ ನಾವು ತೊರೆದು ಬೀದಿಯಲ್ಲಿ ಬದುಕುವ ಕಾಲ ಬರಬಹುದು.
- ರಾಮಚಂದ್ರ ಏಡಕೆ ಆರ್ಎಸ್ಎಸ್ ಬೆಳಗಾವಿ ವಿಭಾಗದ ಕಾರ್ಯನಿರ್ವಾಹ