ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠ, ಪೀಠ, ಗುರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಲ್ಲಿ ಮಾತ್ರ ಸಮಾಜದ ಬಡವ, ಬಲ್ಲಿದ, ನಿರ್ಗತಿಕರು ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ತಿಳಿಸಿದ್ದಾರೆ.

- ಬೆಳ್ಳೂಡಿ ಕನಕ ಗುರು ಪೀಠದ ಶಾಖಾ ಮಠದ ದಶಮಾನೋತ್ಸವ । ಶ್ರೀ ರೇವಣಸಿದ್ದೇಶ್ವರ ಜಯಂತಿ । ಸಾಮೂಹಿಕ ವಿವಾಹ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠ, ಪೀಠ, ಗುರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಲ್ಲಿ ಮಾತ್ರ ಸಮಾಜದ ಬಡವ, ಬಲ್ಲಿದ, ನಿರ್ಗತಿಕರು ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ತಿಳಿಸಿದರು.

ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಕನಕ ಗುರು ಪೀಠದ ಶಾಖಾ ಮಠದ ದಶಮಾನೋತ್ಸವ, ಜಗದ್ಗುರು ರೇವಣಸಿದ್ದೇಶ್ವರ ಜಯಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ದಿನಗಳಲ್ಲಿ ಮಠ, ಪೀಠದ ಪೀಠಾಧೀಶರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತಮ್ಮ ಸಮಾಜಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾದಾಗ ಅದಕ್ಕೆ ನೂರೆಂಟು ತೊಡಕುಗಳು ಬರುವುದು ಸಾಮಾನ್ಯ, ಅವೆಲ್ಲವನ್ನು ಮೀರಿ ಕನಕ ಪೀಠದ ಶ್ರೀ 10 ವರ್ಷದಲ್ಲಿ ನಾವು ಸಾಧಿಸಲಾಗದಷ್ಟು ಸಾಧನೆಯನ್ನು ಸಾಧಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಠಾಧೀಶರ ಕುರಿತು ಸಮಾಜದಲ್ಲಿ ಮೊದಲಿದ್ದ ಉತ್ತಮ ವಾತಾವರಣ ಮಾಯವಾಗುತ್ತಿದೆ. ಕಾವಿಧಾರಿಗಳನ್ನು ಅನುಮಾನದಿಂದ ನೋಡುವಂಥ ವಾತಾವರಣ ಸೃಷ್ಠಿಯಾಗಿದೆ ಎಂದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀ ಮಾತನಾಡಿ, 2014 ರಲ್ಲಿ ಬೆಳ್ಳೂಡಿ ಶಾಖಾ ಮಠವನ್ನು ಕಟ್ಟುವುದಕ್ಕಾಗಿ ಜಾಗವನ್ನು ಖರೀದಿಸಲು ಮುಂದಾಗಿದ್ದ ಸಮಯದಲ್ಲಿ, ರಾಜ್ಯದ ಹಾಗೂ ಹರಿಹರ ತಾಲೂಕಿನ ಹಾಲುಮತ ಸಮಾಜದ ಬಂಧುಗಳು ನೀಡಿದ್ದ 98, 50 ಲಕ್ಷ ದೇಣಿಗೆಯಿಂದ 6,5 ಎಕರೆ ಜಮೀನನ್ನು ಖರೀದಿಸಿ, 2015ರಲ್ಲಿ ಕೇವಲ 210 ದಿನಗಳಲ್ಲಿಯೇ ಮಠವನ್ನು ನಿರ್ಮಿಸಲಾಯಿತು. 2016 ಮಾ.28ರಂದು ಮಠವನ್ನು ಲೋಕಾರ್ಪಣೆ ಮಾಡಿದ್ದೇವೆ. 4 ಎಕರೆ 18 ಗುಂಟೆ ಬೀರೇಶ್ವರ ದೇವಸ್ಥಾನದ ಜಾಗವನ್ನು ಬೆಳ್ಳೂಡಿ ಗ್ರಾಮದವರು ಮಠಕ್ಕೆ ನೀಡಿದ್ದರು ಎಂದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ಮಠದ ಅಭಿವೃದ್ಧಿಗಾಗಿ ಸರ್ಕಾರದಿಂದ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಸ್ಥಾಪಿಸಲು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಠದ ಆವರಣದಲ್ಲಿ, ಹಾಸ್ಟೆಲ್ ನಿರ್ಮಿಸಲು ಅನುದಾನ ನೀಡಿದ್ದಾರೆ. ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ಹಸಿವು ಮುಕ್ತ ಹಾಗೂ ಸಮಗ್ರ ಅನ್ನದಾತರ ಬದುಕಿಗೆ ನೆಮ್ಮದಿ ನೀಡಲು, ಬೈರನಪಾದ ಏತನೀರಾವರಿ ಯೋಜನೆ ಜಾರಿಗೆ ತರಬೇಕು. ರೇವಣಸಿದ್ದೇಶ್ವರ ಶ್ರೀಗಳ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು. ಕಟ್ಟಕಡೆಯ ಕುರುಬರಿಗೂ ಸರ್ಕಾರದ ಸೌಲಭ್ಯ ದೊರೆಯಲು ಎಸ್.ಟಿ. ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

* ಸಾಮೂಹಿಕ ವಿವಾಹ ಶ್ಲಾಘನೀಯ:

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಅಖಂಡ ಭಾರತದಲ್ಲಿ ಜಾತ್ಯತೀತ ಸಮಾಜ ನಿರ್ಮಿಸಲು ಸಾಧುಗಳು, ಸಿದ್ದರು, ಸತ್ಪುರುಷರು ಶ್ರಮಿಸಿದ್ದಾರೆ. ಕನಕದಾಸರು, ಬಸವಣ್ಣನವರಾದಿಯಾಗಿ ಅನೇಕ ಶರಣರು ಹೇಳಿದಂಥ ಸಮಸಮಾಜ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ. ಅದರಂತೆ ಶ್ರೀಮಠದಿಂದ ಜಾತ್ಯತೀತವಾಗಿ 45 ಜೋಡಿ ಸಾಮೂಹಿಕ ವಿವಾಹ ಕಾರ್ಯವನ್ನು, ತಮ್ಮ ಮನೆ ಮಕ್ಕಳ ಮದುವೆಯಂತೆ ಎಲ್ಲವನ್ನು ನೀಡಿ ಮದುವೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಅಂದು ಕಲ್ಯಾಣ ಕ್ರಾಂತ್ರಿಯ ಸಮಯದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರು ಚಿಂತನೆಯ ಮೂಲಕ ನೀಡಿದ್ದ ಸಮಸಮಾಜದ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಬನಶಂಕರಿ ಶಕ್ತಿಪೀಠದ ಸ್ವಾಮಿ ಗೋವರ್ಧನಾನಂದ ಪುರಿ ಶ್ರೀ, ಕೌಲಗುಡ್ಡ ಅಮರೇಶ್ವರ ಸ್ವಾಮೀಜಿ, ಸೋಮಲಿಂಗೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ನಂದಿಗುಡಿ ವೃಷಭಪುರಿ ಮಹಾಸಂಸ್ಥಾನದ ಮುಮ್ಮಡಿ ಸಿದ್ದರಾಮೇಶ್ವರ ಶ್ರೀ, ಹೊಸದುರ್ಗದ ಕುಂಚಿಟಿಗರ ಮಹಾಸಂಸ್ಥಾನದ ಡಾ. ಶಾಂತವೀರ ಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಮಡಿವಾಳ ಮಾಚಿದೇವ ಗುರುಪೀಠದ ಮಾಚಿದೇವ ಶ್ರೀಗಳು, ಕೆಲ್ಲೋಡು ಕನಕ ಗುರುಪೀಠದ ಶಾಖಾ ಮಠದ ಈಶ್ವರಾನಂದಪುರಿ ಶ್ರೀ, ಮಾದಾರ ಚನ್ನಯ್ಯ ಗುರುಪೀಠದ ಮಾದಾರಶ್ರೀ, ಅಂಬಿಗರ ಚೌಡಯ್ಯ ಮಹಾಸಂಸ್ಥಾನದ ಶಾಂತಭೀಷ್ಮ ಚೌಡಯ್ಯ ಶ್ರೀ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಸಭಾಪತಿ ರಘುನಾಥ ಮಲ್ಕಾಪುರೆ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಇತರರು ಭಾಗವಹಿಸಿದ್ದರು.

* ಮಠಗಳಿಂದ ಸಮಾಜಮುಖಿ ಕಾರ್ಯ: ನಿರಂಜನಾನಂದ ಶ್ರೀಗಳು ಮತ್ತು ಈಶ್ವರಾನಂದ ಶ್ರೀಗಳು ಸೇರಿದಂತೆ ಕುರುಬ ಸಮುದಾಯದ ಸ್ವಾಮೀಜಿಗಳು ರಾಜ್ಯಾದ್ಯಂತ ಸಂಚರಿಸಿ ಸಮುದಾಯವನ್ನು ಒಟ್ಟುಗೂಡಿಸುವುದರ ಜೊತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದು ಬೈರತಿ ಸುರೇಶ್‌, ಸಾಮೂಹಿಕ ವಿವಾಹದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ 49 ಜೋಡಿಗಳಿಗೆ ಶುಭ ಕೋರಿದರು.

- - -

(ಬಾಕ್ಸ್‌-1) * ಪ್ರಾಮಾಣಿಕ ರಾಜಕಾರಣಿಗಳ ಸಾಲಿನಲ್ಲಿ ಸಿದ್ದುಗೆ ಮೊದಲ ಸ್ಥಾನ: ಬೈರತಿ ಸುರೇಶ್‌

ದೇಶದ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದರು. ಹರಿಹರದ ಬೆಳ್ಳೂಡಿ ಗ್ರಾಮದ ಶ್ರೀ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದಲ್ಲಿ ಶುಕ್ರವಾರ ನಡೆದ ಶಾಖಾಮಠದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಧಾನಿಯಲ್ಲಿ 50 ಎಕರೆ ಭೂಮಿಯಲ್ಲಿ, ರಾಜ್ಯದ ವಿವಿಧ ಮಠಗಳ ಅಭಿವೃದ್ಧಿಗಾಗಿ ಭೂಮಿ ನೀಡಿದ್ದಾರೆ. 2 ಬಾರಿ ಮುಖ್ಯಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ ಸವೇ ಜನಾಃ ಸುಖಿನೋ ಭವಂತು ಎಂಬಂತೆ ಕೆಲಸ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಕುರುಬ ಸಮಾಜ ಹಿಂದಿನಂತಿಲ್ಲ. ಕನಕ ಗುರುಪೀಠದ ಸ್ವಾಮೀಜಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂಥ ಧೀಮಂತ ನಾಯಕರ ಮಾರ್ಗದರ್ಶನದಿಂದಾಗಿ ಇಂದು ಸುಶಿಕ್ಷಿತ ಸಮಾಜವಾಗಿ ಹೊರಹೊಮ್ಮಿದೆ. ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದರು.

ಬೆಂಗಳೂರಿನ ಶ್ರೀನಿವಾಸ ನಗರದಲ್ಲಿ ನಾವೆಲ್ಲಾ ನಾಯಕರು ಸೇರಿ ಸಮುದಾಯದ ಹೆಣ್ಣುಮಕ್ಕಳಿಗಾಗಿ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ ಮಾಡಿದ್ದೇವೆ. ಇದಲ್ಲದೇ, ಶತಮಾನದ ಇತಿಹಾಸವಿರುವ ಗಾಂಧಿನಗರದ ಕರ್ನಾಟಕ ಕುರುಬರ ಸಂಘದ ಕಟ್ಟಡದ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಈ ಹೊಸ ಕಟ್ಟಡವನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವಾಗಲೇ ಅವರಿಂದಲೇ ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

7 ಕೋಟಿ ಜನರ ಧ್ವನಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಸಮಸ್ತ ಕನ್ನಡನಾಡಿನ 7 ಕೋಟಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಯಕಯೋಗಿ ಶ್ರೀ ಬಸವಣ್ಣನವರ ಸಮಸಮಾಜ ನಿರ್ಮಾಣದ ಪರಿಕಲ್ಪನೆಯ ತಳಹದಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಮಾರ್ಗದರ್ಶನದಲ್ಲಿಯೇ ಅವರು ನಮ್ಮ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಬೈರತಿ ಸುರೇಶ್‌ ಹೇಳಿದರು.

ರಾಜ್ಯಕ್ಕೆ 17 ಬಜೆಟ್‌ಗಳನ್ನು ಕೊಟ್ಟಿರುವ ಸಿದ್ದರಾಮಯ್ಯನವರು 2 ಬಾರಿ ಪ್ರತಿಪಕ್ಷದ ನಾಯಕ, ಎರಡು ಬಾರಿ ಮುಖ್ಯಮಂತ್ರಿಯಾಗಿ 45 ವರ್ಷದಿಂದ ರಾಜ್ಯದ ಜನತೆಗಾಗಿ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಯಾವುದೇ ಜಾತಿ ಜನಾಂಗ ಎನ್ನದೇ ಪ್ರತಿಯೊಂದು ಮಠಗಳಿಗೆ ನೂರಾರು ಕೋಟಿ ರು. ಅನುದಾನವನ್ನು ನೀಡಿದೆ. ಬೆಂಗಳೂರಿನ ಯಲಹಂಕದಲ್ಲಿ ಸಾವಿರಾರು ಕೋಟಿ ರು. ಬೆಲೆ ಬಾಳುವ 50 ಎಕರೆ ಜಮೀನನ್ನು ಅಹಿಂದ ವರ್ಗಗಳ ಮಠಗಳಿಗೆ ನೀಡಲು ಮಹತ್ವದ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

- - -

-10ಎಚ್.ಆರ್.ಆರ್1: ಹರಿಹರ ತಾ. ಕಾಗಿನೇಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಿರಂಜನಾನಂದಪುರಿ ಶ್ರೀ, ಭೈರತಿ ಸುರೇಶ್‌, ಡಾ। ಯತೀಂದ್ರ ಸಿದ್ದರಾಮಯ್ಯ ಇತರರು ಭಾಗವಹಿಸಿದ್ದರು. -10ಎಚ್.ಆರ್.ಆರ್1ಎ: ಹರಿಹರ ತಾಲೂಕಿನ ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ನಡೆದ ಕಾರ್ಯಕ್ರಮದ ಉಚಿತ ಸಾಮೂಹಿಕ ವಿವಾಹದಲ್ಲಿ ವಧು-ವರರ ಜತೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ, ಸಚಿವ ಭೈರತಿ ಸುರೇಶ್‌, ವಿಪ ಸದಸ್ಯ ಡಾ| ಯತೀಂದ್ರ ಸಿದ್ದರಾಮಯ್ಯ ಹಾಗೂ ಇತರರು ಭಾಗವಹಿಸಿದ್ದರು.-10ಎಚ್.ಆರ್.ಆರ್1ಎ: ಹರಿಹರ ತಾಲೂಕಿನ ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಅವರನ್ನು ಹೂವಿನ ಮಳೆ ಸುರಿಸುವ ಮೂಲಕ ಗೌರವಿಸಲಾಯಿತು. ಸಚಿವ ಭೈರತಿ ಸುರೇಶ್‌, ವಿಪ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಇತರರು ಭಾಗವಹಿಸಿದ್ದರು.

- - -