ವೇದಿಕೆಯಲ್ಲಿ ಮಂಚನಬೆಲೆ ಡಾನ್ಸ್ ಶ್ರೀನಿವಾಸ್ ಅವರ ಯಶವಂತ ಅಕಾಡಮಿ ಆಫ್ ಕಲ್ಚರಲ್ ಫಿಲ್ಮ್ ಸೈನ್ಸ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನ ನೃತ್ಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅನೇಕ ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವಲ್ಲಿ ನಿಸ್ವಾರ್ಥ ಸಮಾಜ ಸೇವೆ ಸಹಕಾರಿಯಾಗಿದೆ ಎಂದು ಏಡುಕೊಂಡಲು ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಟಿ.ಶ್ರೀನಿವಾಸಪ್ಪ ತಿಳಿಸಿದರು. ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಏಡುಕೊಂಡಲು ಬಿಲ್ಡರ್ಸ್ ಮತ್ತು ಡೆವಲಪರ್ಸ್ ವತಿಯಿಂದ ಗ್ರಾಮದ ಪ್ರತಿ ಮನೆಗೆ ಹೊದಿಕೆಗಳನ್ನು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ 100ಕ್ಕೂ ಹೆಚ್ಚು ವಿಶೇಷ ಚೇತನ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದರು.ಸಮಾಜವನ್ನು ಪೀಡಿಸುತ್ತಿರುವ ಬಹುದೊಡ್ಡ ಪಿಡುಗು ಬಡತನ. ಅಂತಹ ಬಡತನದಲ್ಲಿ ನೊಂದು ಬೆಂದಿರುವ ನನಗೆ ಇಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ನೀಡುವ ಮೂಲಕ ಬಡ ಕುಟುಂಬದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಹೆಮ್ಮೆಯೆನಿಸುತ್ತದೆ ಎಂದರು.
ನಾನು ಅನೇಕ ಕಷ್ಟಗಳನ್ನು ಎದುರಿಸಿ ಶ್ರಮದ ಮೂಲಕ ಈ ಮಟ್ಟಕ್ಕೆ ಬೆಳೆದಿದ್ದೇನೆ. ಬಡ ಜನರ ನೋವು ನನಗೆ ತಿಳಿದಿದೆ. ಕಳೆದ 20 ವರ್ಷಗಳಿಂದ ನನ್ನ ಆದಾಯದ ಒಂದು ಭಾಗವನ್ನು ನಿರಂತರವಾಗಿ ಬಡವರ ನೆರವಿಗೆ ಬಳಸುತ್ತಿದ್ದೇನೆ. ವಿಶೇಷವಾಗಿ ಬಡ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನನ್ನ ಕೈಲಾದಷ್ಟು ಸಹಾಯ ನೀಡುತ್ತಿದ್ದೇನೆ. ಇಂದಿನ ಮಕ್ಕಳೇ ದೇಶದ ಭವಿಷ್ಯ, ಅವರಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ವ್ಯಕ್ತಿಗಳಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು.ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಜೀವನ ನಡೆಸುವ ಹಕ್ಕಿದೆ. ಸಂಕಷ್ಟಗಳ ನಡುವೆ ಖುಷಿಯನ್ನು ಅನೇಕರು ಮರೆತು ಬಿಡುತ್ತಾರೆ. ಅಂತಹವರ ಬದುಕಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸಂತೋಷ ತರಲು ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ನನ್ನ ಸಮಾಜಸೇವೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮಾತನಾಡಿ, ಇಂತಹ ದೇಣಿಗೆಗಳು ಸಮಾಜದ ಬಡವರಿಗೆ ಸ್ವಲ್ಪ ಮಟ್ಟಿಗಾದರೂ ಸಹಾಯಕವಾಗುತ್ತವೆ ಜೊತೆಗೆ ಇತರರಿಗೆ ಪ್ರೇರಣೆಯಾಗುತ್ತವೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಸಂತೋಷ ನೀಡುವಂತಹ ಈ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಮಂಚನಬೆಲೆ ಡಾನ್ಸ್ ಶ್ರೀನಿವಾಸ್ ಅವರ ಯಶವಂತ ಅಕಾಡಮಿ ಆಫ್ ಕಲ್ಚರಲ್ ಫಿಲ್ಮ್ ಸೈನ್ಸ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನ ನೃತ್ಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.
ಕಾರ್ಯಕ್ರಮದಲ್ಲಿ ಅಗಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದಸ್ವಾಮಿ, ಸದಸ್ಯ ಡಾ.ಚಂದ್ರಪ್ಪ, ಮಂಚನಬೆಲೆ ಡಾನ್ಸ್ ಶ್ರೀನಿವಾಸ್, ಕರ್ನಾಟಕ ರಕ್ಷಣಾ ವೇದಿಕೆ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ವಕೀಲ ಜಗದೀಶ್ , ರೈತ ಸಂಘದ ಬಿ.ಎಚ್. ನರಸಿಂಹಯ್ಯ, ರಾಮಕೃಷ್ಣಪ್ಪ , ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ.ಎಂ., ಗಾಯತ್ರಿ, ರಾಮಕ್ಕ, ಶ್ರೀ ರಾಮಪುರ ಗ್ರಾಮದ ಯುವ ಮುಖಂಡರಾದ ಅರವಿಂದ್, ಶಿವನಾಗ, ಜಗದೀಶ್, ಗಿರೀಶ್, ಗ್ರಾಮದ ಯುವಕರ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.ರಾಜೀವ್ ಗೌಡ ನಡೆ ಅಕ್ಷಮ್ಯ ಅಪರಾಧ:
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಮೇಲೆ ನಿಂದಿಸಿರುವ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಬಗ್ಗೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮಾತನಾಡಿ, ದೇಶದ ಸಂಸ್ಕೃತಿಯ ಭಾಗವಾಗಿ ಹೆಣ್ಣನ್ನು ಪೂಜಿಸುತ್ತೇವೆ, ಅಂತ ಮಹಿಳಾ ಸಿಬ್ಬಂದಿಯ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾಡಿರುವ ಮಾನಸಿಕ ವೇಧನೆ ಅಕ್ಷಮ್ಯ ಅಪರಾಧ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಬೇಕು. ಅವರದೇ ಸರ್ಕಾರ ಇರುವುದರಿಂದ ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡು ಕಾನೂನು ಪಾಲನೆಗೆ ಮುಂದಾಗ ಬೇಕಿದೆ, ಸ್ವಪಕ್ಷದವರಿಂದಲೇ ಅವರ ಈ ಕ್ರಿಯೆಗೆ ಪ್ರತಿರೋಧ ವ್ಯಕ್ತವಾಗಿದ್ದು ಮಹಿಳೆಯರನ್ನು ಎಲ್ಲಿ ಪೂಜ್ಯನೀಯ ಸ್ಥಾನ ನೀಡುತ್ತೇವೆಯೋ ಅಲ್ಲಿ ಲಕ್ಷ್ಮೀ ನಿವಾಸ ಇರುತ್ತದೆ ಎಂಬ ಸತ್ಯಾಂಶವು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.