ಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ಯುವಪೀಳಿಗೆಯು ಅನೇಕ ದೊಡ್ಡ ಸಾಹಿತಿಗಳ ಬಗ್ಗೆ ಕೇಳಿರುತ್ತಾರೆ ಹೊರತು ಅವರನ್ನು ಅರಿಯುವ ಕೆಲಸ ಮಾಡಿರುವುದಿಲ್ಲ. ಹೀಗಾಗಿ, ಅವರ ಬಗ್ಗೆ ಓದುವ ಮೂಲಕ ಅವರನ್ನು ಅರಿತುಕೊಳ್ಳಬೇಕು ಎಂದು ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಕರೆ ನೀಡಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಣದಲ್ಲಿ ಮುದ್ದುರಾಮ ಬಳಗ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕೆಸಿಎಸ್ ಕಾವ್ಯ ಕುತೂಹಲ ಕುರಿತು ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಕೆ.ಸಿ. ಶಿವಪ್ಪ ಅವರು ಹಿರಿಯ ಸಾಹಿತಿಗಳ, ಕಲಾವಿದರ ಸಂಪರ್ಕ ಸ್ನೇಹವನ್ನು ಉಳ್ಳವರಾಗಿದ್ದರು. ಇವೆಲ್ಲವರೂ ಆಶ್ಚರ್ಯವೂ ವಿಶೇಷವಾಗಿ ಕಾಣುತ್ತದೆ. ಅವರ ಸಾಹಿತ್ಯದ ಸಂಬಂಧದಲ್ಲಿ ಕವಿತೆಗಳು, ವಿಚಾರ ವಿಮರ್ಶೆಗಳು, ಮುಕ್ತಕಗಳ ಮಂಜರಿಗಳು ಸಾಕಷ್ಟು ಸಮೃದ್ಧವಾಗಿದೆ ಎಂದು ಅವರು ತಿಳಿಸಿದರು.ಕೆ.ಸಿ. ಶಿವಪ್ಪ ಅವರ ಪರಿಚಯ ಭಾಗ್ಯ ಬಹಳ ದೊಡ್ಡದು. ದತ್ತಿ ಉಪನ್ಯಾಸಕ್ಕಾಗಿ ಡಿವಿಜಿ ಅವರನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಮಾಡಿಸಿ ಪ್ರಕಟ ಮಾಡುವುದಕ್ಕೆ ಅವರು ಮಾಡಿದ ಸಾಹಸ ದೊಡ್ಡದು. ನಂತರ ಮಾಸ್ತಿ, ವಿ. ಸೀತಾರಾಮಯ್ಯ ಸೇರಿದಂತೆ ಅನೇಕರನ್ನು ಆಹ್ವಾನಿಸಿದ್ದರು. ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಎಂದು ಅವರು ಸ್ಮರಿಸಿದರು.
ಶಿವಪ್ಪ ಅವರು 30 ಸಾವಿರ ಮುದ್ದುರಾಮ ಚೌಪದಿಗಳನ್ನು ಸಿದ್ಧಮಾಡಿದ್ದಾರೆ. ಇದರ ಜತೆಗೆ ಸ್ಪರ್ಧಿಸುವುದಾದರೆ ಅದು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿ ಮಾತ್ರ. ಇಲ್ಲಿಂದಲೇ ಸ್ಪರ್ಧಿಸುವ ಪರಂಪರೆ ಬೆಳೆಯಿತು. ಭಾಷಾ ವಿಜ್ಞಾನಿ ಬಿಳಿಗಿರಿ, ಮಹಾಕವಿ ಕುವೆಂಪು, ಇತಿಹಾಸ ತಜ್ಞ ದಿನಕರ ದೇಸಾಯಿ, ವಿದ್ವಾಂಸರಾದ ತೀ.ನಂ.ಶ್ರೀಕಂಠಯ್ಯ ಅವರು ಮುಕ್ತಕಗಳ ಮನೋಜ್ಞತೆಗೆ ಮಾರು ಹೋಗಿದ್ದಾರೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಎಚ್ಎಂಟಿ ನಿವೃತ್ತ ಅಧ್ಯಕ್ಷ ಎನ್. ರಾಮಾನುಜ, ಮುದ್ದುರಾಮ ಪ್ರತಿಷ್ಠಾನ ಉಪಾಧ್ಯಕ್ಷ ಡಾ. ನೀಲಗಿರಿ ತಳವಾರ, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಮೊದಲಾದವರು ಇದ್ದರು.