ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ತಾಪಂ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆದ ನಂತರ ಸಭಾಂಗಣದಿಂದ ಹೊರ ಬಂದ ನ್ಯಾಯಾಧೀಶರು ತಾಪಂ ಕಟ್ಟಡದ ಶಿಥಿಲಾವ್ಯವಸ್ಥೆಯನ್ನು ಕಂಡು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ. ಅರವೀಂದ್ರ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಚಂದನ್ ತಾಪಂ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತ ತಲುಪಿರುವುದನ್ನು ಕಂಡ ಆಶ್ವರ್ಯಚಿಕಿತರಾಗಿ ಇಲ್ಲಿ ನೌಕರರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕಚೇರಿಯಲ್ಲಿ ಇರುವ ಕಾರ್ಯ ನಿರ್ವಹಣಾಧಿಕಾರಿ, ಆಡಳಿತಾಧಿಕಾರಿ ಮತ್ತು ಗ್ಯಾರಂಟಿ ಸಮಿತಿ ಅಧ್ಯಕ್ಷರು ಕೊಠಡಿಗಳು ಸ್ವಚ್ಚವಾಗಿವೆ, ಆದರೆ ಕಚೇರಿಯ ಆವರಣ ಮತ್ತು ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಇದನ್ನು ಹೇಳುವವರು ಹಾಗೂ ಕೇಳುವವರು ಯಾರು ಇಲ್ಲವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಮತ್ತು ಕಚೇರಿ ಸಂಪರ್ಕ ರಸ್ತೆ ಹಾಳಾಗಿರುವುದನ್ನು ಕಂಡು ಸಖೇದಾಶ್ವರ್ಯ ವ್ಯಕ್ತಪಡಿಸಿದ ನ್ಯಾಯಾಧೀಶರು, ಅಧಿಕಾರಿಗಳು ಕಟ್ಟಡದ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದು ಇದನ್ನು ದುರಸ್ಥಿ ಪಡಿಸಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು. ಕಾರ್ಯ ನಿರ್ವಹಣಾಧಿಕಾರಿ ಬಗ್ಗೆ ಅಸಮಾಧಾನ:ತಾಪಂ ಆಡಳಿತ ಸಭಾಂಗಣದಲ್ಲಿ ಕಾರ್ಮಿಕರ ದಿನಾಚರಣೆ ನಡೆಯುತ್ತಿದ್ದು, ಇಲ್ಲಿಗೆ ನ್ಯಾಯಾಧೀಶರು ಆಗಮಿಸಿದ್ದರು. ಕಾರ್ಯ ನಿರ್ವಹಣಾಧಿಕಾರಿ ವಿ.ಪಿ. ಕುಲದೀಪ್ ಬಾರದಿದ್ದರಿಂದ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಇಂತಹ ವರ್ತನೆಯನ್ನು ಅಧಿಕಾರಿಗಳು ತಿದ್ದಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.