ಗುಳೆ ಹೋದ ಕುಟುಂಬದವರ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶೇಷ ವಸತಿ ಶಾಲೆ : ಮಾಜಿ ಸಚಿವ ಸಿ.ಸಿ. ಪಾಟೀಲ

| N/A | Published : Feb 27 2025, 02:01 AM IST / Updated: Feb 27 2025, 01:09 PM IST

ಗುಳೆ ಹೋದ ಕುಟುಂಬದವರ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶೇಷ ವಸತಿ ಶಾಲೆ : ಮಾಜಿ ಸಚಿವ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ರಾಜ್ಯಗಳಿಗೆ ಕೆಲಸ ಅರಸಿ ಗುಳೆ ಹೋಗುವ ಕುಟುಂಬದವರ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶೇಷ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಗದಗ: ನೆರೆಯ ರಾಜ್ಯಗಳಿಗೆ ಕೆಲಸ ಅರಸಿ ಗುಳೆ ಹೋಗುವ ಕುಟುಂಬದವರ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶೇಷ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಅವರು ಮಂಗಳವಾರ ನಗರದ ಡಾ. ಬಿ.ಆರ್.ಅಂಬೇಡ್ಕರ ಭವನದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲರ 286 ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನರಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸುವ ಸೇವಾಲಾಲ್‌ ಸಮುದಾಯ ಭವನಕ್ಕೆ ₹ 20 ಲಕ್ಷ ಅನುದಾನ ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸಂತ ಸೇವಾಲಾಲರು ಸಮಾಜದಲ್ಲಿನ ಅನಿಷ್ಟ ನಿವಾರಿಸುವಲ್ಲಿ ಪಣತೊಟ್ಟ ಮಹಾನಾಯಕರು. ಅರಣ್ಯ ಭೂಮಿ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕಾಗಿ ಸಭೆ ಕರೆದು ಚರ್ಚಿಸುತ್ತೇನೆ ಹಾಗೂ ಸೇವಾಲಾಲ್‌ ವೃತ್ತವನ್ನು ಅಭಿವೃದ್ಧಿಗೊಳಿಸಲು ಆಯುಕ್ತರಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ, ಸಮಾಜವು ಉತ್ತಮ ಶಿಕ್ಷಣ ಪಡೆದು ದೇಶದಲ್ಲಿರುವ ಉನ್ನತ ಹುದ್ದೆ ಅಲಂಕರಿಸಬೇಕು ಹಾಗು ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.ವೇದಿಕೆಯಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಲಿಂಗಸ್ಗೂರಿನ ವಿಜಯ ಮಹಾಂತೇಶ್ವರಮಠ ಶ್ರೀಗಳಾದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗು ಕೃಷ್ಣಾಪುರದ ಗವಿಮಠ ಆದ್ರಹಳ್ಳಿ ಬಂಜಾರ ಗುರುಪೀಠದ ಡಾ.ಕುಮಾರ ಮಹಾರಾಜರು ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.

ವಕೀಲ ರವಿಕಾಂತ ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಬಂಜಾರ ಸಮುದಾಯಕ್ಕೆ ಸ್ವಂತ ಸಮುದಾಯ ಭವನದ ಅವಶ್ಯಕತೆ ಇದೆ ಹಾಗೂ ಬಗರಹುಕುಂ ಸಾಗುವಳಿ ಜಮೀನು, ಅರಣ್ಯ ಭೂಮಿ ಉಳಿಮೆದಾರರಿಗೆ ಹಕ್ಕು ಪತ್ರ ನೀಡಬೇಕು, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸರ್ಕಾರ ಯೋಜನೆ ರೂಪಿಸಬೇಕು ಹಾಗೂ ನಮ್ಮ ಸಮಾಜ ಜಾಗೃತರಾಗಿ ಸರ್ಕಾರದಿಂದ ಒದಗಿಸುವ ಸವಲತ್ತು ಪಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದು ನಾಯಕ ವಹಿಸಿದ್ದರು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಮುಖಂಡ ಆನಂದ ಗಡ್ಡದೇವರಮಠ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಿವಿಧ ತಾಂಡಾಗಳ ನಾಯಕ ಡಿ.ಎಲ್.ನಾಯಕ, ಶಿವಪುತ್ರಪ್ಪ ನಾಯಕ, ಶಿವಪ್ಪ ನಾಯಕ, ರಾಮಪ್ಪ ನಾಯಕ, ಮಿಟ್ಟಪ್ಪ ನಾಯಕ, ರಾಜು ನಾಯಕ, ಪಾಂಡಪ್ಪ ನಾಯಕ, ಖಿಮಪ್ಪ ನಾಯಕ, ನೂರಪ್ಪ ನಾಯಕ, ಕುಬೇರ ನಾಯಕ, ಟೀಕು ನಾಯಕ, ಶ್ರೀನಿವಾಸ ನಾಯಕ, ತೇಜಪ್ಪ ನಾಯಕ ಹಾಗೂ ಕೆ.ಸಿ. ನಭಾಪೂರ, ಐ.ಎಸ್.ಪೂಜಾರ, ಚಂದ್ರಕಾಂತ ಚವ್ಹಾಣ, ಸೋಮು ಲಮಾಣಿ, ಪಾಂಡು ಚವ್ಹಾಣ, ನೀಲು ರಾಠೋಡ, ಟಿ.ಡಿ. ಪೂಜಾರ, ವಿಠ್ಠಲ್ ತೋಟದ, ಡಾ. ವೆಂಕಟೇಶ ರಾಠೋಡ, ಗಣೇಶ ಲಮಾಣಿ, ಪರಮೇಶ ನಾಯಕ, ಅನೀಲ ಕಾರಭಾರಿ, ಹಾಮಜಪ್ಪ ಬಡಿಗೇರ, ಕುಬೇರಪ್ಪ ಪವಾರ, ತುಕಾರಾಮ ಲಮಾಣಿ, ತುಕಾರಾಮ ನಾಯಕ, ಲೋಕೇಶ ಕಟ್ಟಿಮನಿ, ಶಿವು ಅರಕಸಾಲಿ, ಸುಭಾಸ ಗುಡಿಮನಿ, ಕುಬೇರಪ್ಪ ರಾಠೋಡ, ದಯಾನಂದ ಪವಾರ, ಭೀಮಸಿಂಗ್ ರಾಠೋಡ ಹಾಗೂ ಸಮಾಜದ ಗಣ್ಯರು ಹಾಜರಿದ್ದರು.

ಮಂಗಳವಾರ ಬೆಳಗ್ಗೆ ನಗರಸಭೆಯ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸೇವಾಲಾಲ್‌ ಮಹಾರಾಜರ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯು ಗಾಂಧಿ ವೃತ್ತದ ಮೂಲಕ ಸಾಗಿ ವಿವಿಧ ಗ್ರಾಮಗಳ ಭಜನಾ ತಂಡದೊಂದಿಗೆ ಬಂಜಾರ ಕಲೆ ಭಿತ್ತರಿಸುತ್ತ ಗಾಯನಕ್ಕೆ ಹೆಜ್ಜೆ ಹಾಕುತ್ತಾ ವಿವಿಧ ಮೂಲ ವೃತ್ತಗಳಲ್ಲಿ ಸಂಚರಿಸಿ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ಬಂದು ತಲುಪಿತು.