ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪರಿಸರ ಅಸಮತೋಲನದಿಂದ ಮುಂದಿನ ಪೀಳಿಗೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪರಿಸರ ಕಾರ್ಯಕರ್ತ ರಮೇಶ್ ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಶ್ರೀನಿವಾಸ ಅಗ್ರಹಾರ ಸಮೀಪದ ಕರಿಘಟ್ಟ ಬೆಟ್ಟದಲ್ಲಿ ಬ್ರಹ್ಮೋತ್ಥಾನ ಸೇವಾ ಪರಿಷತ್ ವತಿಯಿಂದ ಆಯೋಜಿಸಿದ್ದ ಹಸಿರು-ವನ ಮಹೋತ್ಸವದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ತಲಾ ವ್ಯಕ್ತಿಗೆ ಲಭ್ಯವಿರುವ ಮರಗಳ ಸಂಖ್ಯೆ ಹಾಗೂ ಇತರೆ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ತಲಾವಾರು ಅತೀ ಕಡಿಮೆ ಮರಗಳು ಇರುವುದರಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಮರಗಳ ಸಂಖ್ಯೆ ಹೆಚ್ಚಿಸಲು ತಕ್ಷಣವೇ ಸರ್ಕಾರ ಹಾಗೂ ನಾಗರಿಕ ಸಮಾಜ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು.ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ಶುದ್ಧ ನೀರು ಹಾಗೂ ಆರೋಗ್ಯಕರ ಪರಿಸರವನ್ನು ಒದಗಿಸಲು ಅರಣ್ಯ ಸಂರಕ್ಷಣೆ ಮತ್ತು ಹೊಸ ಅರಣ್ಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಸರ್ಕಾರ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜನರು ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕರಿಘಟ್ಟ ಬೆಟ್ಟದ ಸಾಲಿನಲ್ಲಿ ನೂರಕ್ಕೂ ಹೆಚ್ಚು ಕಾಡು ಜಾತಿಯ ಸಸಿಗಳು ಹಾಗೂ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ನೀರುಣಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಚಿದರವಳ್ಳಿ ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮೋತ್ಥಾನ ಸೇವಾ ಅಧ್ಯಕ್ಷ ಶಿವ ಪ್ರಸಾದ್, ಉಪಾಧ್ಯಕ್ಷ ಪವನ್ ಕುಮಾರ್, ಪ್ರಮೋದ್ ಶರ್ಮ, ವೆಂಕಟರಾಮ್, ಸಂದೇಶ್, ಅರಣ್ಯ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.ಸೊಸೈಟಿ ಅಧ್ಯಕ್ಷರಾಗಿ ಸಿಂಧು ಗೌಡ ಆಯ್ಕೆ
ಶ್ರೀರಂಗಪಟ್ಟಣ:ತಾಲೂಕಿನ ನಗುವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿಂಧು ಗೌಡ ಅವಿರೋಧವಾಗಿ ಆಯ್ಕೆಯಾದರು.ನಿಕಟ ಪೂರ್ವ ಅಧ್ಯಕ್ಷ ಕೃಷ್ಣಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಸಂಘದಲ್ಲಿ ಒಟ್ಟು 13 ಮಂದಿ ನಿರ್ದೇಶಕರಿದ್ದು, ಸಿಂಧುಗೌಡ ಒಬ್ಬರೆ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಸಂಘದ ಕಾರ್ಯದರ್ಶಿ ರಶ್ಮಿ ಅವಿರೋಧ ಎಂದು ಘೋಷಣೆ ಮಾಡಿದರು.ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಸಂಘಕ್ಕೆ ಅಧ್ಯಕ್ಷೆಯಾಗಿರುವುದು ವಿಶೇಷ ಎನ್ನಲಾಗಿದೆ. ಸಂಘದ ಉಪಾಧ್ಯಕ್ಷ ಮಧು, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಗ್ರಾಮದ ಮುಖಂಡರಾದ ಶಿವಸ್ವಾಮಿ, ಎಂ. ಭಾಸ್ಕರ್, ಜಯರಾಮ್, ಎಸ್.ನಾರಾಯಣ್, ಸುಂದರ್, ಮೋಹನ್ ಕುಮಾರ್, ಮಾನಸ ನೇತ್ರಾವತಿ ಸೇರಿದಂತೆ ಗ್ರಾಮದ ಮುಖಂಡರು ಅಭಿನಂದಿಸಿದರು.