ಶಿಗ್ಗಾಂವಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರ ಧಾನ್ಯ ವಿತರಣೆ ವೇಳೆ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ದಿನಕ್ಕೆ ಕೇವಲ ೫೦ರಿಂದ ೬೦ ಕಾರ್ಡಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಗ್ರಾಹಕರು ಹಾಗೂ ನ್ಯಾಯಬೆಲೆ ಅಂಗಡಿ ವಿತರಕರ ನಡುವೆ ಪ್ರತಿನಿತ್ಯ ವಾಗ್ವಾದ ನಡೆಯುವಂತಾಗಿದೆ ಎಂದು ಶಿಗ್ಗಾಂವಿ ತಾಲೂಕು ಪಡಿತರ ಆಹಾರ ಧಾನ್ಯ ವಿತರಕರ ಸಂಘ ಆರೋಪಿಸಿದೆ.

ಶಿಗ್ಗಾಂವಿ: ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರ ಧಾನ್ಯ ವಿತರಣೆ ವೇಳೆ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ದಿನಕ್ಕೆ ಕೇವಲ ೫೦ರಿಂದ ೬೦ ಕಾರ್ಡಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಗ್ರಾಹಕರು ಹಾಗೂ ನ್ಯಾಯಬೆಲೆ ಅಂಗಡಿ ವಿತರಕರ ನಡುವೆ ಪ್ರತಿನಿತ್ಯ ವಾಗ್ವಾದ ನಡೆಯುವಂತಾಗಿದೆ ಎಂದು ಶಿಗ್ಗಾಂವಿ ತಾಲೂಕು ಪಡಿತರ ಆಹಾರ ಧಾನ್ಯ ವಿತರಕರ ಸಂಘ ಆರೋಪಿಸಿದೆ.

ಈ ಕುರಿತು ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಸರ್ವರ್ ಸಮಸ್ಯೆ ಹಾಗೂ ಪಡಿತರ ಧಾನ್ಯಗಳ ಎತ್ತುವಳಿ ವಿಳಂಬದ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಪಡಿತರ ಧಾನ್ಯಗಳ ಎತ್ತುವಳಿ ತಡವಾಗುತ್ತಿರುವುದರಿಂದ ಅಂಗಡಿಗಳಿಗೆ ಧಾನ್ಯಗಳು ತಡವಾಗಿ ಸರಬರಾಜಾಗುತ್ತಿವೆ. ಮತ್ತೊಂದೆಡೆ, ಸರ್ವರ್ ಸಮಸ್ಯೆಯಿಂದ ವಿತರಣೆ ಕಾರ್ಯವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿಗದಿತ ಅವಧಿಯಲ್ಲಿ ಎಲ್ಲ ಕಾರ್ಡದಾರರಿಗೆ ಪಡಿತರ ವಿತರಿಸುವುದು ಹೇಗೆ ಎಂಬುದು ತಿಳಿಯದಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ಇನ್ನು ಕೇವಲ ಎರಡು ದಿನ ಮಾತ್ರ ಪಡಿತರ ವಿತರಣೆಗೆ ಅವಕಾಶವಿದ್ದು, ಇದೇ ರೀತಿ ಸರ್ವರ್ ಸಮಸ್ಯೆ ಮುಂದುವರಿದರೆ ಹೆಚ್ಚಿನ ಸಂಖ್ಯೆಯ ಕಾರ್ಡಗಳು ವಿತರಣೆಯಾಗದೆ ಬಾಕಿ ಉಳಿಯುವ ಸಾಧ್ಯತೆ ಇದೆ. ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ಬಾಕಿ ಉಳಿದರೆ ನ್ಯಾಯಬೆಲೆ ಅಂಗಡಿ ವಿತರಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಬಾರದು ಎಂದು ಸಂಘ ಮನವಿ ಮಾಡಿದೆ.

ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸರ್ವರ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡು, ಬಾಕಿ ಉಳಿಯುವ ಕಾರ್ಡಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಶಿಗ್ಗಾಂವಿ ತಾಲೂಕು ಪಡಿತರ ಆಹಾರ ಧಾನ್ಯ ವಿತರಕರ ಸಂಘ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ರಾಜ್ಯ ಪಡಿತರ ವಿತರಕರ ಸಂಘದ ಉಪಾಧ್ಯಕ್ಷ ರಜಕಸಾಹೇಬರು ತಹಶೀಲ್ದಾರ, ತಾಲೂಕು ಅಧ್ಯಕ್ಷ ರವಿ ಎಚ್. ಕಳ್ಳಿಮನಿ, ವೀರಪ್ಪ ಎಫ್. ಸುಬರಗಟ್ಟಿ, ಮಲ್ಲೇಶಪ್ಪ ಶಿರಬಡಗಿ, ಈರಣ್ಣ ಬಿ. ಗಡೆಣ್ಣವರ, ಯಲ್ಲಪ್ಪ ಫ. ಹಂಚಿನಮನಿ, ದೇವಿಂದ್ರಪ್ಪ ಜಾಧವ, ಭಾಷೇಸಾಬ ಬುಕೆಟಗಾರ, ಜಾವೇದಖಾನ ಯಳ್ಳೂರ, ಕಲಂದರ ಪೇರಂಡಿ, ರಾಜು ಯಲಿಗಾರ, ಮಂಜುನಾಥ ಕೆಂಗಾಪೂರ, ಅಶೋಕ ಹಡಪದ ಸೇರಿದಂತೆ ಹಲವಾರ ಪಡಿತರ ವಿತರಕರು ಇದ್ದರು.