ನೇತ್ರದಾನವು ಅಂಧತ್ವ ನಿವಾರಣೆಗೆ ಅತ್ಯಂತ ಮಹತ್ವದ ಕೊಡುಗೆಯಾಗಿದ್ದು, ಪ್ರತಿಯೊಬ್ಬರೂ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಮಧುರ ಪ್ಯಾರಡೈಸ್ ಮಾಲೀಕ ಹಾಗೂ ಶಿವಮೊಗ್ಗ ರೋಟರಿ ಅಧ್ಯಕ್ಷ ಎನ್. ಗೋಪಿನಾಥ್ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೇತ್ರದಾನವು ಅಂಧತ್ವ ನಿವಾರಣೆಗೆ ಅತ್ಯಂತ ಮಹತ್ವದ ಕೊಡುಗೆಯಾಗಿದ್ದು, ಪ್ರತಿಯೊಬ್ಬರೂ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಮಧುರ ಪ್ಯಾರಡೈಸ್ ಮಾಲೀಕ ಹಾಗೂ ಶಿವಮೊಗ್ಗ ರೋಟರಿ ಅಧ್ಯಕ್ಷ ಎನ್. ಗೋಪಿನಾಥ್ ಅಭಿಮತ ವ್ಯಕ್ತಪಡಿಸಿದರು. ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ನೇತ್ರದಾನ ಪಕ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾ ಮನೋಭಾವ ಮತ್ತು ಆದರ್ಶಮಯ ಬದುಕಿನ ಪ್ರತೀಕವಾಗಿರುವ ನೇತ್ರದಾನವು ಅಂಧತ್ವದಿಂದ ಬಳಲುತ್ತಿರುವವರಿಗೆ ಹೊಸ ಬೆಳಕು ನೀಡುತ್ತದೆ. 60 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಎಲ್ಲ ಸದಸ್ಯರ ಸೇವೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಮಲ್ಲಿಕಾರ್ಜುನ ಖಾನೂರ್ ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ನೇತ್ರದಾನ ಮತ್ತು ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ಸೆ.8 ರವರೆಗೆ ನಡೆಯುತ್ತಿರುವ ನೇತ್ರದಾನ ಪಕ್ಷಾಚರಣೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ರೋಟರಿ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗವರ್ನರ್ ಜಿ. ವಿಜಯ್ ಕುಮಾರ್ ನೇತ್ರದಾನದ ಮಹತ್ವ ವಿವರಿಸಿ, ಅಂಧತ್ವ ನಿವಾರಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ನೇತ್ರದಾನದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ ಎಂದರು.ಫ್ರೆಂಡ್ಸ್ ಸೆಂಟರ್ ನೇತ್ರ ಹಾಗೂ ರಕ್ತ ಭಂಡಾರದ ಚೇರ್ಮನ್. ವಿ ನಾಗರಾಜ್ ಸಂಸ್ಥೆಯ ನೇತ್ರದಾನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಪ್ರಸ್ತಾವನೆಗೈದರು.ಡಾ. ಲಕ್ಷ್ಮಿದೇವಿ ಗೋಪಿನಾಥ್, ರೋಟರಿ ಕಾರ್ಯದರ್ಶಿ ಶೈಲಿನ್ ಬಾಬು, ಡಿ.ಪಿ. ಮೋಹನ್, ಮಾಜಿ ಅಧ್ಯಕ್ಷ ಟಿ. ಅಶ್ವಥ್ ನಾರಾಯಣ್, ಯೋಗಗುರು ಬಾ.ಸು. ಅರವಿಂದ್, ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಅಧ್ಯಕ್ಷೆ ಸುನಿತಾ ಮೋಹನ್, ಸದಾನಂದ, ಶ್ರೀಮತಿ ಸದಾನಂದ, ಸತ್ಯನಾರಾಯಣ ಹಾಗೂ ಆರ್. ಮನೋಹರ್ ಉಪಸ್ಥಿತರಿದ್ದರು.

-----ಪೋಟೋ:------

06ಎಸ್‌ಎಂಜಿಕೆಪಿ02

ಶಿವಮೊಗ್ಗದ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ ಸಂಸ್ಥೆಯ ವತಿಯಿಂದ ನೇತ್ರದಾನ ಪಕ್ಷಾಚರಣೆ ಕಾರ್ಯಕ್ರಮ ನಡೆಯಿತು. ಎನ್. ಗೋಪಿನಾಥ್, ಮಲ್ಲಿಕಾರ್ಜುನ ಖಾನೂರ್, ಜಿ. ವಿಜಯ್ ಕುಮಾರ್ ಇತರರಿದ್ದರು.