ಕನ್ನಡಪ್ರಭ ವಾರ್ತೆ ರಾಮದುರ್ಗ
ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ನಡೆಸುತ್ತಿರುವ 2ಎ ಮೀಸಲಾತಿ ಹೋರಾಟವನ್ನು ಕೆಲ ಪಟ್ಟಭದ್ರ ಹಿತಾಶಕ್ತಿಗಳು ದಾರಿ ತಪ್ಪಿಸುತ್ತಿದ್ದಾರೆ. ಸಮಾಜದ ಸಾಮಾನ್ಯ ಜನತೆ ಪ್ರತಿಯೊಂದು ಹೋರಾಟಕ್ಕೆ ಕೈ ಜೋಡಿಸಿ, ಶಕ್ತಿ ತುಂಬಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ನಗರದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾ ಘಟಕದ ನೇತೃತ್ವದಲ್ಲಿ 2025-26 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಮುಖಂಡರು ಸಾಮಾನ್ಯ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಒತ್ತು ನೀಡಬೇಕು. ಮಕ್ಕಳ ವ್ಯಾಸಂಗದ ಭವಿಷ್ಯದ ಹಿತದೃಷ್ಠಿಯಿಂದ ನಡೆಯುತ್ತಿರುವ ಮೀಸಲಾತಿ ಹೋರಾಟವನ್ನು ನಿಲ್ಲಿಸುವುದಿಲ್ಲ ಸರ್ವರೂ ಒಂದಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ ಮಾತನಾಡಿ, ದೊಡ್ಡ ಮುಖಂಡರು ಎಂದು ನಾವು ನಂಬಿಕೊಂಡು ಹೋರಾಟ ಮಾಡಿ ಅವರಿಂದ ಪ್ರತಿ ಹೆಜ್ಜೆಗೂ ಪಾಠ ಕಲಿತಿದ್ದೇವೆ. ಸಮಾಜದ ಜನತೆ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಹೋರಾಟಕ್ಕೆ ಕರೆ ಕೊಟ್ಟಾಗ ಪಾಲ್ಗೊಳ್ಳಬೇಕೆಂದರು.
ವಕೀಲ ಎಫ್.ಎಸ್.ಸಿದ್ದನಗೌಡ್ರ ಮಾತನಾಡಿ, ರಾಜ್ಯ ಸರಕಾರದ 2ಎ, ಕೇಂದ್ರ ಸರಕಾರದ ಓಬಿಸಿ ಮೀಸಲಾತಿ ದೊರೆತಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಶಕ್ತಿ ಪಡೆದು, ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ರಾಜ್ಯದ ಸಮಸ್ತ ಸಮಾಜ ಬಾಂಧವರು ಸಂಘಟಿತ ಹೋರಾಟ ಮಾಡಲು ಒಗ್ಗಟ್ಟಾಗಬೇಕಿದೆ ಎಂದರು.ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪಿ.ಎಫ್.ಪಾಟೀಲ, ಮುಖಂಡರಾದ ಎನ್.ಬಿ. ದಂಡಿನದುರ್ಗಿ, ಡಾ. ರಮೇಶ ಪಟಗುಂದಿ, ಉಪನ್ಯಾಸಕ ಮೈಲಾರಪ್ಪ ಸಿದ್ಧಗಿರಿ ಸೇರಿದಂತೆ ಇತರರು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಮಸಾಲಿ ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ಸಿ.ಬಿ.ಪಾಟೀಲ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ತಾಲೂಕಿನ ಸಮಾಜ ಬಾಂಧವರು ಸಂಘಟನೆಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಗನಗೌಡ ಪಾಟೀಲ, ಶಾಸನಗೌಡ ಪಾಟೀಲ, ಬಿ.ಎಫ್ ಬಸಿಡೋಣಿ, ಎಂ.ಎನ್.ದೇಸಾಯಿ, ಬಾಳಪ್ಪ ಹಂಜಿ, ಶ್ರೀದೇವಿ ಮಾದನ್ನವರ, ಪ್ರಶಾಂತಗೌಡ ಪಾಟೀಲ, ಉಮೇಶ ಕೊಳವಿ, ಜಿ.ವ್ಹಿ.ನಾಡಗೌಡ್ರ, ಮಹಾದೇವಪ್ಪ ಮದಕಟ್ಟಿ, ದ್ಯಾವಪ್ಪ ಬೆಳವಡಿ, ವಿಜಯ ಗುಡದಾರಿ, ನಿಂಗನಗೌಡ ಪಾಟೀಲ, ಬಸವರಾಜ ಕೊಪ್ಪದ, ಉಮೇಶ ಪಟಗುಂದಿ, ಎಂ.ಎಸ್.ಕಿತ್ತಲಿ ಸೇರಿದಂತೆ ಇತರರಿದ್ದರು. ಗೌಡಪ್ಪಗೌಡ ಪಾಟೀಲ ಸ್ವಾಗತಿಸಿದರು. ಸುಮಂಗಲಾ ಕಳಸಪ್ಪನವರ ನಿರೂಪಿಸಿದರು. ಶಿವಪ್ಪ ಮೇಟಿ ವಂದಿಸಿದರು.