ಶಿಗ್ಗಾಂವಿ: ಸಂತ ಸೇವಾಲಾಲರು ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತೋರುವ ಮೂಲಕ ೧೮ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ, ಸಮಾಜ ಸುಧಾರಣೆ ಮತ್ತು ಪ್ರಾಕೃತಿಕ ಸಂರಕ್ಷಣೆ ಬಗ್ಗೆ ಧ್ವನಿ ಎತ್ತಿದ ಕ್ರಾಂತಿಕಾರಿ ಸಂತರಾಗಿದ್ದುರು ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲರ ಜನ್ಮ ದಿನಾಚರಣೆಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸೇವಾಲಾಲರು ಮೂಢನಂಬಿಕೆ ತೊರೆದು ಶಿಕ್ಷಣ ಮತ್ತು ಸಂಸ್ಕಾರದತ್ತ ಸಮಾಜವನ್ನು ಮುನ್ನಡೆಸುವ ಆಸೆಯನ್ನು ಹೊಂದಿದವರಾಗಿದ್ದು, ಅವರ ಸಂದೇಶಗಳನ್ನು ಪ್ರಸ್ತುತ ಸಮಾಜ ಪಾಲಿಸಬೇಕಾಗಿದೆ.ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರ ಸಂಸ್ಕೃತಿ, ಕಲೆ ಮತ್ತು ಪರಿಶ್ರಮಗಳು ನಮ್ಮ ಮಣ್ಣಿನ ಶಕ್ತಿಗಳಾಗಿ ನಿಂತಿವೆ. ನಮ್ಮ ಸರ್ಕಾರ ಮತ್ತು ನನ್ನ ವೈಯಕ್ತಿಕ ಆಸಕ್ತಿಯಿಂದ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಗುರುತಿಸಿ ಪ್ರತಿಯೊಬ್ಬರಿಗೂ ಹಕ್ಕುಪತ್ರ ನೀಡುವ ಮೂಲಕ ಸಾಮಾಜಿಕ ಭದ್ರತೆ ಒದಗಿಸಲು ಬದ್ದನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.ಬಿಜೆಪಿ ಮುಖಂಡ ಶಿವಾನಂದ ಮ್ಯಾಗೇರಿ ಮಾತನಾಡಿ, ಸಂತ ಸೇವಾಲಾಲರ ಜಯಂತಿ ಕೇವಲ ಹಬ್ಬವಲ್ಲ, ಅದು ಅವರು ತೋರಿದ ಸತ್ಯ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ದಿನವಾಗಿದೆ. ಎಲ್ಲರೂ ಸೇರಿ ಒಂದು ಸದೃಢ, ಸಮೃದ್ಧ ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಎಲ್ಲಪ್ಪ ಗೋಣೆಣ್ಣನವರ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಅಣ್ಣಪ್ಪ ಲಮಾಣಿ, ಗುಡ್ಡಪ್ಪ ಜಲದಿ, ಎಸ್.ಎಫ್.ಮಣಕಟ್ಟಿ, ಬಾಬರ ಬಾವೋಜಿ, ಕರಿಯಪ್ಪ ಕಟ್ಟಿಮನಿ ಇತರರಿದ್ದರು.