ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಸಹಿತ ಎಲ್ಲ ಜ್ಞಾನ ಕ್ಷೇತ್ರಗಳಲ್ಲಿ ಭಗವಂತನ ಸ್ಮರಣೆ ಮೂಲಕ ಆರಂಭಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಉತ್ತಮ ಕಾರ್ಯಗಳಿಗೆ ಭಗವಂತನ ಕೃಪೆ ಪ್ರತಿಯೊಬ್ಬರಿಗೂ ಅಗತ್ಯ ಎಂದು ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಎಸ್.ಶಿವಕುಮಾರ್ ತಿಳಿಸಿದರು.ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕುಮದ್ವತಿ ಕೇಂದ್ರಿಯ ವಸತಿ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಜತೆಗೆ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇವೆ, ಓದಬೇಕು ಎನ್ನುವ ಜಾಗೃತ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸಿನ ದಾರಿ ಸುಗಮವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿದ್ಯಾರ್ಥಿಗಳು ತಮ್ಮ ಬದುಕಿನ ಉದ್ದಕ್ಕೂ ಶಿಸ್ತು ಸಹನೆಯಿಂದ ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಬೇಕು ಎಂದ ಅವರು, ಜಗತ್ತಿನ ಎಲ್ಲ ಅತ್ಯುತ್ತಮ ಶ್ರೇಷ್ಠ ವ್ಯಕ್ತಿಗಳು ಛಲ, ಆತ್ಮವಿಶ್ವಾಸದಿಂದ ಸಾಧಿಸಿ ತೋರಿಸಿದ್ದಾರೆ. ನ್ಯೂನತೆಗಳ ಬಗ್ಗೆ ಹೆಚ್ಚು ಯೋಚಿಸದೆ ಅಂತಃ ಶಕ್ತಿಯ ಬಗ್ಗೆ ಹೆಚ್ಚು ಯೋಚಿಸಿ. ಭವಿಷ್ಯದಲ್ಲಿ ಯುವಪೀಳಿಗೆಯ ಆಲೋಚನೆಗಳು ದೇಶವನ್ನು ಆಳುತ್ತದೆ. ಇದರಿಂದಾಗಿ ಆಲೋಚನೆಗಳು ಉತ್ತಮವಾಗಿರಲಿ. ಎಲ್ಲ ವಿದ್ಯಾರ್ಥಿಗಳ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಕುಮದ್ವತಿ ವಿಜ್ಞಾನ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವೀರೇಂದ್ರ ಮಾತನಾಡಿ, ಬದುಕಿನಲ್ಲಿ ಪ್ರಯತ್ನ ಮತ್ತು ಶ್ರಮದ ಬೆವರನ್ನು ಸುರಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಈ ಯಶಸ್ಸನ್ನು ಕಾಣಲು ಇಚ್ಛಾಶಕ್ತಿ ಮತ್ತು ಚಿಕ್ಕ ಚಿಕ್ಕ ಪ್ರಯತ್ನ ನಿತ್ಯವೂ ನಿರಂತರವಾಗಿ ಸದ್ದಿಲ್ಲದೆ ನಡೆಯುತ್ತಿರಬೇಕು ಎಂದು ತಿಳಿಸಿದರು.
ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯ ವಿಶ್ವನಾಥ.ಪಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಿ ಎಂದರು.
ವಿದ್ಯಾರ್ಥಿ ದಿಶಾ ಭಟ್ ಮತ್ತು ಸಮೀರ್ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಸಲ್ಲಿಸಿ ವಿವಿಧ ಬಗೆಯ ನೃತ್ಯ ಆಟೋಟಗಳ ಮೂಲಕ ಮನೋರಂಜನಾ ಕಾರ್ಯಕ್ರಮ ನಡೆಯಿತು.ಶಿಕ್ಷಕಿ ಕೀರ್ತಿ, ಹತ್ತನೇ ತರಗತಿ ವಿದ್ಯಾರ್ಥಿಗಳ ಜತೆ ಶಾಲಾ ದಿನಗಳಲ್ಲಿ ಕಳೆದ ಅತ್ಯುತ್ತಮ ನೆನಪುಗಳನ್ನು ಪಿಪಿಟಿ ಪ್ರದರ್ಶಿಸಿ ನೆನಪುಗಳನ್ನು ಮೆಲುಕು ಹಾಕಲಾಯಿತು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಪ್ರಾಂಶುಪಾಲ ಪ್ರಶಾಂತ್, ಪ್ರಾಚಾರ್ಯ ಪ್ರಭು ಆರ್., ಬೋಧಕ ಬೋಧಕೇತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶ್ರೇಯಾ ಸ್ವಾಗತಿಸಿ, ನಿರೀಕ್ಷಾ ಡಿ ಮತ್ತು ವೇದ ನಿರೂಪಿಸಿ, ಭುವನ್ ವಂದಿಸಿದರು.