ಸಾರಾಂಶ
ಕನ್ನಡಪ್ರಭ ವಾರ್ತೆ ಯರಗಟ್ಟಿ
ಯರಗಟ್ಟಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿನ 7 ಆಸ್ಪತ್ರೆಗಳನ್ನು ತಾಲೂಕು ಆಸ್ಪತ್ರೆಯಾಗಿ ಶೀಘ್ರದಲ್ಲೇ ಮೇಲ್ದರ್ಜೆಗೆ ಏರಿಸಲಾಗುವುದು. ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಸಿಸ್ ಘಟಕವನ್ನು ಪ್ರಾರಂಭಿಸಲಾಗುವುದು ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಮಕ್ಕಳ ತಜ್ಞ, ಅರಿವಳಿಕೆ ತಜ್ಞ, ಎಲುಬು ಕೀಲು ತಜ್ಞರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಅಲ್ಲದೇ, ಶಿಥಿಲಗೊಂಡಿರುವ ಆಸ್ಪತ್ರೆ ಹಾಗೂ ವೈದ್ಯರ ವಸತಿ ಗೃಹಗಳನ್ನು ಇಷ್ಟರಲ್ಲಿಯೇ ನವೀಕರಣಗೊಳಿಸುವುದು ಹಾಗೂ ಆಸ್ಪತ್ರೆಗೆ ಬೇಕಾಗುವ ಮೆಡಿಸಿನ್ ಇನ್ನಿತರ ವಸ್ತುಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಲಾಗುವುದು ಮತ್ತು ಡಿಜಿಟಲ್ ಎಕ್ಸರೇ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಸಚಿವರು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ವಿಶ್ವಾಸ ವೈದ್ಯ, ಡಿಜೆಡಿ ಡಾ.ಶಶಿಕಾಂತ ಮುನ್ಯಾಳ, ಡಿ.ಡಿ ಡಾ.ಪಲ್ಲೇದ, ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಪಾದ ಸಬ್ನೀಸ್, ಸವದತ್ತಿ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ಎಂ.ಮಲ್ಲನಗೌಡ, ಯರಗಟ್ಟಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಬಿ.ಎಸ್.ಬಳ್ಳೂರ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ನೂತನವಾಗಿ ತಾಲೂಕು ಕೇಂದ್ರವಾಗಿರುವ ಯರಗಟ್ಟಿ ಸಮುದಾಯದ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು, ಖಾಲಿ ಇರುವ ತಜ್ಞ ವೈದ್ಯರನ್ನು ಸಿಬ್ಬಂದಿ ನಿಯೋಜನೆ ಮಾಡುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.-ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಮತಕ್ಷೇತ್ರ.