ಐವಾರಹಳ್ಳಿಯ ಬೇತಾಳ ದೇವಸ್ಥಾನದ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಮಾಟ-ಮಂತ್ರದಂತಹ ಮೂಢನಂಬಿಕೆ ಆಚರಣೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆತಂಕ ವ್ಯಕ್ತವಾಗಿತ್ತು.
ಐವಾರಹಳ್ಳಿಯ ಬೇತಾಳ ಮಹಾ ಶಕ್ತಿಪೀಠಕ್ಕೆ ಪೊಲೀಸ್ ದಾಳಿ । ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಎಸ್ಪಿ
ಕನ್ನಡಪ್ರಭ ವಾರ್ತೆ ಬೇತಮಂಗಲಐವಾರಹಳ್ಳಿ ಹೊರ ವಲಯದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಬೇತಾಳ ಮಹಾ ಶಕ್ತಿಪೀಠ ದೇವಸ್ಥಾನಕ್ಕೆ ಪೊಲೀಸ್ ಅಧಿಕಾರಿಗಳೊಂದಿಗೆ ದಿಢೀರ್ ದಾಳಿ ನಡೆಸಿ ಮಠ ಮಂತ್ರ ಅಂದರೆ ಮೂಢನಂಬಿಕೆ ಆಚರಣೆ ಮಾಡುತ್ತಿದ್ದ ಆಘೋರಿ ಚಂದ್ರನ ಹತ್ತಿರದಿಂದ ಒಟ್ಟು ಏಳು ಮಂದಿ ನಕಲಿ ಸ್ವಾಮೀಜಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗಡಿ ಭಾಗದ ಕಂಗಾಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಐವಾರಹಳ್ಳಿಯ ಬೇತಾಳ ದೇವಸ್ಥಾನದ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಮಾಟ-ಮಂತ್ರದಂತಹ ಮೂಢನಂಬಿಕೆ ಆಚರಣೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಶಿವಾಂಶು ರಜಪುತ್ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಕೆಜಿಎಫ್ ಎಸ್ಪಿ ಶಿವಾಂಶು ರಜಪುತ್ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಮಾಟ-ಮಂತ್ರ ಮತ್ತು ಅಮಾನವೀಯ ಆಚರಣೆಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಕರ್ನಾಟಕದ ’ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ’ ಪ್ರಕಾರ ಇಂತಹ ಆಚರಣೆಗಳು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ನಿಷೇಧಿತವಾಗಿವೆ.
ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಅಕ್ರಮವಾಗಿ ಕೂಡಿಹಾಕುವುದು, ಅವರಿಗೆ ಕಿರುಕುಳ ನೀಡುವುದು ಮತ್ತು ಪರವಾನಗಿ ಇಲ್ಲದೆ ದೇವಸ್ಥಾನದಿಂದಲೇ ಅನಧಿಕೃತ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಎಸ್.ಪಿ ತಿಳಿಸಿದ್ದಾರೆ.ವ್ಯವಹಾರಿಕ ಜಾಲ ಮತ್ತು ದರಪಟ್ಟಿ:
ನ್ಯಾಯಾಲಯದ ವ್ಯಾಜ್ಯಗಳು, ಕೌಟುಂಬಿಕ ಸಮಸ್ಯೆಗಳು, ಉದ್ಯೋಗದ ಸಮಸ್ಯೆಗಳು ಹಾಗೂ ಮದ್ಯಪಾನದ ಚಟ ಬಿಡಿಸುವ ಹೆಸರಿನಲ್ಲಿ ಇಲ್ಲಿ ವಿವಿಧ ಪೂಜೆಗಳನ್ನು ಮಾಡಲಾಗುತ್ತಿತ್ತು. ದೇವಸ್ಥಾನದ ಆವರಣದಲ್ಲಿ ಇದಕ್ಕೆಂದೇ ಪ್ರತ್ಯೇಕ ದರ ಪಟ್ಟಿ ಹಾಗೂ ಪ್ಯಾಕೇಜ್ಗಳನ್ನು ಮಾಡಿಕೊಳ್ಳಲಾಗಿದ್ದು, ಮುಗ್ಧ ಜನರಿಂದ ಹಣ ಸುಲಿಯುವ ವ್ಯವಸ್ಥಿತ ಜಾಲ ಇದರ ಹಿಂದೆ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಅಕ್ರಮವಾಗಿ ತಲೆಎತ್ತಿದ ದೈತ್ಯ ಮೂರ್ತಿ:
ಕಳೆದ ೫ ವರ್ಷಗಳಿಂದ ಈ ದೇವಸ್ಥಾನದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು, ಆವರಣದಲ್ಲಿ ಯಾವುದೇ ಅನುಮತಿ ಪಡೆಯದೇ ಅತ್ಯಂತ ಭಯಾನಕ ವಿನ್ಯಾಸದ ದೈತ್ಯ ಬೇತಾಳ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಮೂರ್ತಿಯು ರಾತ್ರಿ ಹಾಗೂ ಸಂಜೆ ವೇಳೆಯಲ್ಲಿ ಸ್ಥಳೀಯರಲ್ಲಿ ಮತ್ತು ಹಾದಿಹೋಕರಲ್ಲಿ ಭೀತಿ ಮೂಡಿಸುತ್ತಿದೆ. ಇದರ ನಿರ್ಮಾಣಕ್ಕೆ ಪಡೆದಿರುವ ಅನುಮತಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಸ್ವಯಂ ಪ್ರೇರಿತ (ಸುಮೋಟೋ) ಪ್ರಕರಣ ದಾಖಲು:
ಜನರ ಸುರಕ್ಷತೆ ಮತ್ತು ಮುಗ್ಧ ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು ಈ ವಿಷಯ ಗಂಭೀರವಾಗಿ ಪರಿಗಣಿಸಿದ್ದು, ಯಾರದೇ ಅಧಿಕೃತ ದೂರಿಗಾಗಿ ಕಾಯದೆ ಪೊಲೀಸರೇ ಸ್ವಯಂ ಪ್ರೇರಿತವಾಗಿ ಎಫ್.ಐ.ಆರ್ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದರು.ಕಾರ್ಯಚರಣೆಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಬೇತಮಂಗಲ ವೃತ್ತ ನಿರೀಕ್ಷಕ ಜಗದೀಶ್, ಕ್ಯಾಸಂಬಳ್ಳಿ ಪಿಎಸ್ಐ ಸಂಗಮೇಶ್, ಹಾಗೂ ಅನೇಕ ಸಿಬ್ಬಂದಿ ವರ್ಗ ಏಕಕಾಲಕ್ಕೆ ದಾಳಿ ನಡೆಸಿ ನಕಲಿ ಸ್ವಾಮೀಜಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.