ಸಾರಾಂಶ
ಹಾವೇರಿ: ಗುತ್ತಲದ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಿಕ್ಷಕನ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಾಗೂ ಧರ್ಮಸ್ಥಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಎಸ್ಎಫ್ಐ ಹಾಗೂ ಡಿವೈಎಫ್ಐ ಸಮಾನಮನಸ್ಕ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲೆ ನಡೆದ ಗೂಂಡಾಗಳ ದಾಳಿ ತೀವ್ರ ಖಂಡನೀಯ. ರಾಜ್ಯ ಸರ್ಕಾರ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಎಸ್ಎಫ್ಐ ಕಾಲೇಜು ಘಟಕ ಅಧ್ಯಕ್ಷೆ ಚೈತ್ರಾ ಕೊರವರ್ ಗಂಗಾ ಯಲ್ಲಾಪುರ ಮಾತನಾಡಿ, ದೇಶ, ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳು ಅತ್ಯಾಚಾರ ನಡೆಯುತ್ತಿರುವುದು ಖಂಡನೀಯ. ಗುತ್ತಲದ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಶಿಕ್ಷಕನ ಮೇಲೆ ಶಿಸ್ತು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಶಾಲಾ- ಕಾಲೇಜು, ಹಾಸ್ಟೆಲ್ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.ಬಿಎಸ್ಎಸ್ ಮಹಿಳಾ ರಾಜ್ಯಾಧ್ಯಕ್ಷೆ ಮಂಜುಳಾ ಎಸ್ ಅಕ್ಕಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಮಾತನಾಡಿದರು. ಈ ಸಂದರ್ಭದಲ್ಲಿ ಕೆಎಸ್ಡಿಎಫ್ ಮುಖಂಡರಾದ ತಿಪ್ಪೇಸ್ವಾಮಿ ಹೊಸಮನಿ, ಬಿಎಸ್ಎಸ್ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ, ಎಸ್ಎಫ್ಐ ಮುಖಂಡರಾದ ಹಜರತ್ ಬಿ., ಸುನೀಲ್ ಕುಮಾರ್ ಎಲ್., ಅರುಣ ಕುಮಾರ ನಾಗವತ್, ಫಕೀರೇಶ ಮೇಗಳಮನಿ, ಸುದೀಪ ಲಮಾಣಿ, ನವೀನ ರಾಥೋಡ್, ಚೇತನ್ ಲಮಾಣಿ, ಮುತ್ತಪ್ಪ ಲಮಾಣಿ, ವಿಜಯ ಎನ್., ಸಂಜೀವ ಕೆ. ಸೇರಿದಂತೆ ಇತರರು ಇದ್ದರು.