ಸಾರಾಂಶ
ಚಿತ್ರದುರ್ಗ: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ರೇವಣ್ಣ ಕೂಡಲೇ ಬಂಧಿಸಿ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆಯಿಂದ ಜೆಡಿಎಸ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಲಾಯಿತು.
ಮನವಿ ಸ್ವೀಕರಿಸಲು ಬಾರದ ಜೆಡಿಎಸ್ ಮುಖಂಡರುಗಳ ವಿರುದ್ಧವೂ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು ಮನವಿ ಪತ್ರವನ್ನು ಜೆಡಿಎಸ್ ಕಚೇರಿಯ ಗೋಡೆಗೆ ಅಂಟಿಸಿದರು.ಎರಡು ಸಾವಿರಕ್ಕೂ ಹೆಚ್ಚು ಲೈಂಗಿಕ ಪ್ರಕರಣದಲ್ಲಿ ತೊಡಗಿರುವ ಪ್ರಜ್ವಲ್ ರೇವಣ್ಣ ಜರ್ಮನ್ಗೆ ಪಲಾಯನಗೊಂಡಿದ್ದು, ಕೂಡಲೇ ಅಲ್ಲಿಂದ ಬಂಧಿಸಿ ಕರೆತರಬೇಕು. ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೈಂಗಿಕ ಹಗರಣಕ್ಕೆ ಯಾವುದೇ ರಾಜಕೀಯ ಬಣ್ಣ ಬೆರೆಸದೆ ಕೂಡಲೇ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಬಂಧಿಸಿ ಪಕ್ಷದಿಂದ ಉಚ್ಛಾಟಿಸಬೇಕು, ಆದಷ್ಟು ತನಿಖೆಯನ್ನು ಚುರುಕುಗೊಳಿಸಬೇಕೆಂದು ಎಂದು ಒತ್ತಾಯಿಸಿದರು.
ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಯನ್ನು ಎಸ್ಐಟಿಗೆವಹಿಸಿದೆ. ಏನು ತಪ್ಪು ಮಾಡಿಲ್ಲವೆಂದ ಬಳಿಕ ಪ್ರಜ್ವಲ್ ರೇವಣ್ಣ ಯಾಕೆ ಜರ್ಮನಿಗೆ ಪಲಾಯನಗೊಂಡು ತಲೆ ಮೆರೆಸಿಕೊಳ್ಳಬೇಕು ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಪ್ರಶ್ನಿಸಿದರು.ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷೆ ರತ್ನಮ್ಮ, ಸಂಚಾಲಕ ಹರೀಶ್ಕುಮಾರ್, ನಗರಾಧ್ಯಕ್ಷ ಅವಿನಾಶ್, ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು, ರಾಜಣ್ಣ, ಕಮಲಮ್ಮ, ಸುರೇಶ್, ನಿಸಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.