ಜು. 12ರಂದು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ
ಕನಕಗಿರಿ: ಗುಂಪುಗಾರಿಕೆ ನಡೆಸಿ ವಿದ್ಯಾರ್ಥಿಗಳ ನಡುವಿನ ಹಲ್ಲೆಗೆ ಕಾರಣರಾದ ಪಟ್ಟಣದ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ಬಾಬು ನಡಲಮನಿ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ಸಮಾಜ ಕಲ್ಯಾಣ ಆಯುಕ್ತರಿಗೆ ಎಸ್ಎಫ್ಐ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ಜು. 12ರಂದು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಶಾಲಾ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ದೈಹಿಕ ಶಿಕ್ಷಕ ಬಾಬು ನಡಲಮನಿ ಗುಂಪುಗಾರಿಕೆಯಿಂದ ಈ ಘಟನೆ ನಡೆಯಲು ಪ್ರಮುಖ ಕಾರಣರಾಗಿದ್ದಾರೆ. ಘಟನೆ ತಿಳಿಗೊಳಿಸಲು ಪಾಲಕರ ಸಭೆ ನಡೆಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಜು.15ರಂದು ಶಾಲೆಗೆ ದಿಢೀರ್ ಭೇಟಿ ನೀಡಿರುವ ಉಪನಿರ್ದೇಶಕರು ಪಾಲಕರ ಸಭೆ ನಡೆಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರ ಹಾಗೂ ಮಕ್ಕಳ ಜತೆ ಮಾಹಿತಿ ಪಡೆಯುವಾಗಲು ವಿದ್ಯಾರ್ಥಿ ಸಂಘಟನೆಯ ಪ್ರಮುಖರನ್ನು ಶಾಲೆಯ ಒಳಗಡೆ ಕರೆದುಕೊಳ್ಳದೆ ಅವಮಾನಿಸಲಾಗಿದೆ. ಸಮಾಜ ಕಲ್ಯಾಣಾಧಿಕಾರಿಗಳ ನಡೆ ಖಂಡನೀಯವಾಗಿದ್ದು, ಪ್ರಕರಣಕ್ಕೆ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ಕೈಗೊಂಡು ದೈಹಿಕ ಶಿಕ್ಷಕ ಬಾಬು ನಡಲಮನಿ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಘಟಕದ ಅಧ್ಯಕ್ಷ ಹನುಮೇಶ ಮ್ಯಾಗಡೆ, ಪರಶುರಾಮ, ನೀಲಕಂಠ ಬಡಿಗೇರ, ಮೌಲಾಹುಸೇನ್, ನಿಂಗಪ್ಪ, ಹುಸೇನಪ್ಪ, ಶಿವಪ್ಪ, ವೆಂಕಟೇಶ ಸೇರಿದಂತೆ ಇತರರು ಇದ್ದರು.