ಲಕ್ಷ್ಮೇಶ್ವರ: ಶಂಕರಾಚಾರ್ಯರನ್ನು ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರ ಅಲ್ಪಾವಧಿಯ ಜೀವಿತಾವಧಿಯಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ತಿಳಿಸಿದರು.

ಶುಕ್ರವಾರ ಪಟ್ಟಣದ ಶಂಕರ ಭಾರತಿ ಮಠದಲ್ಲಿ ಬ್ರಹ್ಮವೃಂದ ಮತ್ತು ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಶಂಕರಾಚಾರ್ಯರರು ಜಗತ್ತಿನ ಎಲ್ಲ ಸಮಾಜದವರನ್ನು ಕೂಡಿಕೊಂಡು ಹೋಗುವ ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಮಾಡಿ ಸಮಾನತೆಯ ತತ್ವವನ್ನು ಸಾರಿ ಹೇಳಿದ್ದರು. ತಮ್ಮ ಆಳವಾದ ಅಧ್ಯಯನದಿಂದ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜ್ಞಾನ ಸಂಪಾದಿಸಿದ್ದರು ಎಂದರು.

ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆಗೆಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಸನಾತನ ಹಿಂದೂ ಧರ್ಮ ಇಷ್ಟೊಂದು ಬೆಳೆದು ನಿಲ್ಲಲು ಶಂಕರಾಚಾರ್ಯರು ಅಂದು ನೀಡಿದ ಕೊಡುಗೆಗಳೆ ಕಾರಣ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಹೊಂದುತ್ತಿದ್ದಾರೆ. ಅದರಂತೆ ಸಾಮಾಜಿಕವಾಗಿ ಹಾಗೂ ಸಮಾಜದ ಸಂಪ್ರದಾಯಗಳನ್ನೂ ಪಾಲಿಸಿಕೊಂಡು ಹೋಗುವಂತೆ ಪಾಲಕರು ತಿಳಿಸಿಕೊಡುವ ಕಾರ್ಯವಾಗಲಿ ಎಂದರು.

ಈ ವೇಳೆ ಸಮಾಜದ ವತಿಯಿಂದ ಪಂ. ಚಿದಂಬರ ಜೋಶಿ ಅವರಿಗೆ ವಿಪ್ರ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಲೀಪ ಜೋಶಿ ಮತ್ತು ಶಹನಾಯಿ ವಾದಕ ಕೃಷ್ಣಾಜಿ ಕ್ಷತ್ರೀಯ ದಂಪತಿಯನ್ನು ಸನ್ಮಾನಿಸಲಾಯಿತು. ಗುರುರಾಜ ಪಾಟೀಲಕುಲಕರ್ಣಿ, ಅರವಿಂದ ದೇಶಪಾಂಡೆ, ಧ್ರುವರಾಜ ಬೆಟಗೇರಿ, ಡಾ. ಪ್ರಸನ್ನ ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ರಾಜಾಚಾರ್ಯ ರಾಯಚೂರ, ಎ.ಪಿ. ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ, ಧೀರೇಂದ್ರರಾಚಾರ್ಯ ರಾಯಚೂರ, ಶ್ರೀಕಾಂತ ಪೂಜಾರ, ದಿಗಂಬರ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸ ಪೂಜಾರ, ವಿಕ್ರಮ ಶಿರೋಳ, ಅನಿಲ ಕುಲಕರ್ಣಿ, ರಾಘವೇಂದ್ರ ಪೂಜಾರ, ರಾಜು ಹುಲಮನಿ, ಅನಂತಭಟ್ ಪೂಜಾರ ಇದ್ದರು.