ಕನ್ನಡಪ್ರಭ ವಾರ್ತೆ ಮಂಡ್ಯ

ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರನ್ನು ಷಡ್ಯಂತ್ರದಿಂದ ಸೋಲಿಸದಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರು. ಆ ಸಾಮರ್ಥ್ಯ ಅವರಲ್ಲಿತ್ತು. ಶಂಕರಗೌಡರ ರಾಜಕೀಯ ಬೆಳವಣಿಗೆಯನ್ನು ಸಹಿಸದವರು ಕುತಂತ್ರದಿಂದ ಸೋಲಿಸಿ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಸೆರಾಕೇರ್ ಸಭಾಂಗಣದಲ್ಲಿ ಅಮೃತ ಅಲಯನ್ಸ್ ಸಂಸ್ಥೆ, ಬದುಕು ಬೆಳಕು ಸೇವಾ ಸಮಿತಿ, ಕನ್ನಡ ಜಾನಪದ ಪರಿಷತ್, ಮಂಡ್ಯ ಸೆರಾಕೇರ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ನಿತ್ಯ ಸಚಿವ ಕೆ.ವಿ.ಶಂಕರಗೌಡ ೧೧೧ನೇ ವರ್ಷದ ಜನ್ಮದಿನಾಚಣೆ ಪ್ರಯುಕ್ತ ಫಿಜಿಯೋಥೆರಪಿ ತಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿತ್ಯ ಸಚಿವ ಕೆ.ವಿ.ಶಂಕರಗೌಡರ ಆಪ್ತ ಒಡನಾಡಿಗಳಲ್ಲಿ ಒಬ್ಬರಾದ ಎಚ್.ಡಿ.ಚೌಡಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರಚಲಿತದಲ್ಲಿದ್ದ ಕೆ.ವಿ.ಶಂಕರಗೌಡರ ಎದುರು ಚುನಾವಣೆಯಲ್ಲಿ ನಿಲ್ಲಿಸಿ ಕೆವಿಎಸ್‌ಗೆ ಸೋಲುಣಿಸುವ ಷಡ್ಯಂತ್ರ ನಡೆಯಿತು, ಹೀಗಾಗಿ ಶಂಕರಗೌಡರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದರು ಎಂದು ನೆನಪಿಸಿದರು.

ಕೆ.ವಿ.ಶಂಕರಗೌಡ ಅವರು ಎಷ್ಟು ಹೃದಯವಂತರು ಎಂದರೆ ಮುಂದಿನ ದಿನಗಳಲ್ಲಿ ಎಚ್.ಡಿ.ಚೌಡಯ್ಯ ಅವರನ್ನೇ ತಾವು ಕಟ್ಟಿ ಬೆಳೆಸಿದ ಪಿಇಟಿ ಸಂಸ್ಥೆಗೆ ಅಧ್ಯಕ್ಷರನ್ನಾಗಿ ಮಾಡಿ ಎಂದು ಷರಾ ಬರೆದಿರುತ್ತಾರೆ, ಅದರೆಂತೆ ಚೌಡಯ್ಯ ಅವರು ಅಧ್ಯಕ್ಷರಾಗುತ್ತಾರೆ ಎಂದರು.


ಆರೋಗ್ಯ ಭಾಗ್ಯವೇ ನಿಜವಾದ ಸಂಪತ್ತು. ಎಷ್ಟೇ ಸಂಪತ್ತು ಇದ್ದರೂ ಆರೋಗ್ಯ, ಆಯಸ್ಸು ಕೊಂಡುಕೊಳ್ಳಲು ಸಾಧ್ಯವಿಲ್ಲ, ಆರೋಗ್ಯ ರಕ್ಷಣೆಗಾಗಿ ಒಂದು ಗಂಟೆ ಸ್ವಾರ್ಥಭಾವನೆ ಇರಿಸಿಕೊಳ್ಳಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಸೆರಾಕೇರ್ನಲ್ಲಿ ಉಚಿತವಾಗಿ ಫಿಜಿಯೋಥೆರಪಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಸಮಿತಿ ಸದಸ್ಯ ಎಂ.ಎಸ್.ಚಿದಂಬರ್, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವಿಜಯ್ ಕೊಪ್ಪ, ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಸದಸ್ಯ ಮಂಜುನಾಥ್, ಬಸವರಾಜ್, ಫಿಜಿಯೋಥೆರಪಿ ತಜ್ಞ ಶಿವರಾಜ್ ಮತ್ತಿತರರಿದ್ದರು.