ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಿನ್ನೆಲೆಯಲ್ಲಿ ಹಾನಗಲ್ಲದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ತಹಸೀಲ್ದಾರ್ ಎಸ್.ರೇಣುಕಾ ಪೂಜೆ ಸಲ್ಲಿಸಿದರು.
ಹಾನಗಲ್ಲ: ಮನುಕುಲದ ಇತಿಹಾಸದಲ್ಲಿ 12ನೇ ಶತಮಾನ ಸಾಮಾಜಿಕ ಕ್ರಾಂತಿಯ ಮೂಲಕ ಸಮಾನತೆಯ ಸಂಕಲ್ಪಕ್ಕೆ ಮುಂದಾಗಿ ಹತ್ತು ಹಲವು ಅಡೆತಡೆಗಳನ್ನು ಎದುರಿಸಿ ಅತ್ಯುತ್ತಮ ಸಾಹಿತ್ಯ ನೀಡಿರುವುದು ಗಣನೀಯ ಸಂಗತಿ ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.
ಬುಧವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಲೋಪಗಳನ್ನು ಪ್ರಶ್ನಿಸುವ ಮತ್ತು ಅವುಗಳನ್ನು ಸರಿಪಡಿಸುವ ಸುಲಭೋಪಾಯಗಳನ್ನು ನೀಡಿದ ವಚನಕಾರರು, ಎಲ್ಲ ಕಾಲಕ್ಕೂ ಸಲ್ಲುವ ಸತ್ಯಗಳನ್ನು ಸಾರಿದ್ದಾರೆ. ಸರಳ ನಿವೇದನೆಗಳಲ್ಲಿನ ಅವರ ಸಾಹಿತ್ಯ ಸುಲಭವಾಗಿ ಅರ್ಥವಾಗುವಂಥದ್ದು. ನಿಜಶರಣ ಅಂಬಿಗರ ಚೌಡಯ್ಯನವರು ಬಸವಣ್ಣನವರ ಆಪ್ತರಲ್ಲಿ ಆಪ್ತರಾಗಿ ಕಠೋರ ನುಡಿಗಳಿಂದ ಸಾಮಾಜಿಕ ವ್ಯವಸ್ಥೆಯನ್ನು ಖಂಡಿಸಿದವರು. ಸತ್ಸಮಾಜ ನಿರ್ಮಾಣಕ್ಕೆ ಉತ್ತಮ ಮಾರ್ಗಗಳನ್ನು ಕೂಡ ಸೂಚಿಸಿದವರು. ತಾರತಮ್ಯದ ಕಾಲ ಹೋಗಿ ಈಗ ಒಂದಷ್ಟು ಸಮಾನತೆಯ ನಡುವೆ ಇದ್ದೇವೆ. ಇನ್ನೂ ಬದಲಾವಣೆ ಬೇಕಾಗಿದೆ ಎಂದರು.ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ ಮಾತನಾಡಿ, ತಳಮಟ್ಟದ ಸಮುದಾಯದವರು ಒಟ್ಟಾಗಿ ನಿಂತರೇನೂ ತಪ್ಪಿಲ್ಲ. ನಾವೆಲ್ಲ ಜಾತ್ಯತೀತತೆಯ ನಿಲುವಿನಲ್ಲಿ ಬದುಕುವ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಸಮಸಮಾಜ ನಿರ್ಮಾಣಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಮಾರ್ಗದರ್ಶಿಯಾಗಿವೆ. ಬಸವಣ್ಣನವರಿಗೆ ಬಲವಾಗಿದ್ದ ಅಂಬಿಗರ ಚೌಡಯ್ಯನವರು ವೈಚಾರಿಕ ಮತ್ತು ವಿಶ್ವಾಸದ ದಾರಿಯಲ್ಲಿ ನಡೆದ ಮಹಾತ್ಮ ಎಂದರು.
ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಪ್ರದೀಪ ಶೇಷಗಿರಿ ಮಾತನಾಡಿಮುಂದಿನ ದಿನಗಳಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.ಸಮಾಜದ ನಗರ ಘಟಕದ ಅಧ್ಯಕ್ಷ ಭಾಸ್ಕರ ಹುಲಮನಿ, ಅಶೋಕ ಆರೆಗೊಪ್ಪ, ರಾಜೇಂದ್ರ ಬಾರ್ಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ಗಂಗಾ ಹಿರೇಮಠ, ಎಸ್. ಆನಂದ, ಲಕ್ಷ್ಮಣ ಬಾಳಂಬೀಡ, ನಾರಾಯಣ ಕಠಾರಿ, ಮೈಲಾರೆಪ್ಪ ಕರೆಣ್ಣನವರ, ಸಹದೇವಪ್ಪ ಚಿಕ್ಕಣ್ಣನವರ, ಹನುಮಂತಪ್ಪ ಮಲಗುಂದ, ರವಿನಿಂಬಕ್ಕನವರ, ಹೇಮಣ್ಣ ದೊಡ್ಡಮನಿ, ಕರಿಯಪ್ಪ ಆನವಟ್ಟಿ, ಲೋಕೇಶ ಕೊಂಡೋಜಿ, ಸುರೇಶ ಲಕ್ಷ್ಮಣನವರ, ಫಕ್ಕೀರೇಶ ಸಾಲಿ, ಮಲ್ಲೇಶಪ್ಪ ಜಾಡರ, ಮಂಜು ಗುರಣ್ಣನವರ, ಕರಬಸಪ್ಪ ಬಾರ್ಕಿ, ರಾಮಣ್ಣ ಬಾಳಂಬೀಡ, ನಾಗೇಂದ್ರ ಚಿಕ್ಕಣ್ಣನವರ, ಶಿವು ತಳವಾರ, ವಿನಾಯಕ ಸಾತೇನಹಳ್ಳಿ, ಹೊನ್ನಪ್ಪ ಬೋವಿ ಪಾಲ್ಗೊಂಡಿದ್ದರು.