ಸಾರಾಂಶ
ಗದಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕಾಯಕದಿಂದಲೆ ಮುಕ್ತಿ ಎಂಬ ಶರಣರ ವಾಣಿಯಂತೆ ಕೃಷಿ ಕಾಯಕದಲ್ಲಿ ಸಾಧನೆಗೈದವರು. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಲ್ಲಮ್ಮನವರು ಕರುಣಾಮಯಿ ಮತ್ತು ದಾಸೋಹಿಯಾಗಿದ್ದರು ಎಂದು ಚಂದ್ರಶೇಖರ ದೇವರು ಹೇಳಿದರು.
ಅವರು ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2702ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿ, ಸಾಂಸಾರಿಕ ಜೀವನದಲ್ಲಿ ಎದುರಾದ ಅನೇಕ ಕಷ್ಟದ ಪರಿಸ್ಥಿತಿ ಮೆಟ್ಟಿನಿಂತು ಸಮಾಜೋದ್ಧಾರಕ್ಕೆ ಹಗಲಿರುಳು ಶ್ರಮಿಸಿದ ಮಹಾತಾಯಿ. ಮಲ್ಲಮ್ಮನವರ ಜೀವನದ ಆದರ್ಶಗಳು, ಮೌಲ್ಯಗಳು ಅನುಕರಣೀಯ ಎಂದರು.ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿಷಯ ಕುರಿತು ಬನ್ನಿಕೊಪ್ಪ ನಿವೃತ್ತ ಪ್ರಾ.ಪ್ರೊ.ಶಿವಣ್ಣ ಯರಾಶಿ ಉಪನ್ಯಾಸ ನೀಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಮತ್ತು ಕಾಯಕದಿಂದ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾಳೆ. ಹೇಮರಡ್ಡಿ ಮಲ್ಲಮ್ಮನ ಆದರ್ಶ, ಜೀವನ ಮೌಲ್ಯ ಮನುಕುಲಕ್ಕೆ ಮತ್ತು ಇಂದಿನ ಸ್ತ್ರೀ ಕುಲಕ್ಕೆ ಮಾದರಿಯಾಗಿವೆ. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಮಹಾನ್ ಶಿವಶರಣೆ ಎಂದರು.
ಸುಪ್ರಸಿದ್ಧ ವಯೋಲಿನ್ ಮತ್ತು ತಬಲಾ ವಾದಕ ಡಾ.ನಾರಾಯಣ ಹಿರೇಕೊಳಚಿ, ಡಾ. ಗುರುಬಸವ ಮಹಾಮನಿ, ಸುರೇಶ ಮಂಗಳೂರ, ಪಂ.ಶರಣಕುಮಾರ ಗುತ್ತರಗಿ ತ್ರಿಗುಲಬಂದಿ ವಯೋಲಿನ್ ಮತ್ತು ತಬಲಾ ವಾದನಕ್ಕೆ ಜನಮನ ಸೂರೆಗೊಂಡಿತು.ಧರ್ಮಗ್ರಂಥ ಪಠಣವನ್ನು ಪ್ರಶಾಂತ ಶಿವಾನಂದ ಜಡಗೊಂಡ, ವಚನ ಚಿಂತನೆಯನ್ನು ಮಂಜುನಾಥ ಬಸವರಾಜ ಅಸ್ಕಿ ಮಾಡಿದರು. ಶಿವಾನುಭವದ ದಾಸೋಹ ಭಕ್ತಿ ಸೇವೆಯನ್ನು ವಹಿಸಿದ್ದ ಶರಣೆ ಲಿಂ. ಬಸಲಿಂಗಮ್ಮ ಮಲ್ಲಣ್ಣ ದೇಸಾಯಿ ಸ್ಮರಣಾರ್ಥ ಅವರ ಕುಟುಂಬದ ಸದಸ್ಯರನ್ನು ಶ್ರೀಗಳು ಸನ್ಮಾನಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ.ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.