ಸಾರಾಂಶ
೧೨ನೇ ಶತಮಾನದ ದಾರ್ಶನಿಕ ಶರಣರು ವಿಶ್ವಕ್ಕೆ ವಚನ ಸಾಹಿತ್ಯ ಮಹಾನ್ ಕೊಡುಗೆ ನೀಡಿದ ಮಹಾಮಹಿಮರ ಸಂದೇಶಗಳು ಇಂದು ವಿಶ್ವಕ್ಕೆ ಮಾದರಿಯಾಗಿವೆ ಎಂದು ಲಿಂಗಸೂರಿನ ಪ್ರಾಧ್ಯಾಪಕ ದೊಡ್ಡಬಸಪ್ಪ ಹುಡೇದಗಡ್ಡಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ೧೨ನೇ ಶತಮಾನದ ದಾರ್ಶನಿಕ ಶರಣರು ವಿಶ್ವಕ್ಕೆ ವಚನ ಸಾಹಿತ್ಯ ಮಹಾನ್ ಕೊಡುಗೆ ನೀಡಿದ ಮಹಾಮಹಿಮರ ಸಂದೇಶಗಳು ಇಂದು ವಿಶ್ವಕ್ಕೆ ಮಾದರಿಯಾಗಿವೆ ಎಂದು ಲಿಂಗಸೂರಿನ ಪ್ರಾಧ್ಯಾಪಕ ದೊಡ್ಡಬಸಪ್ಪ ಹುಡೇದಗಡ್ಡಿ ತಿಳಿಸಿದರು.
ಇಳಕಲ್ಲಿನ ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ನಡೆದ ಬಸವಜಯಂತಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜನರಾಡುವ ಆಡುಭಾಷೆಯಲ್ಲಿ ಬದುಕು, ಧರ್ಮ, ಆಧ್ಯಾತ್ಮಿಕ ಚಿಂತನೆ ನಡೆಸಿದ ಬಸವಾದಿ ಶರಣರು ವಚನ ಸಾಹಿತ್ಯವನ್ನು ವಿಶ್ವಕ್ಕೆ ನೀಡಿದರು. ಜನಬಾಳ್ವೆಯನ್ನು ದೇವಬಾಳ್ವೆಯನ್ನಾಗಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಅಪ್ಪ ಬಸವಣ್ಣನವರು ಶ್ರಮಿಕ ವರ್ಗವನ್ನು ಸಂಘಟಿಸಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಮಾನತೆಯ ತಳಹದಿಯ ಮೇಲೆ ಅನುಭವ ಮಂಟಪ ಹಾಗೂ ಕಲ್ಯಾಣ ನಗರವನ್ನು ಬಸವಣ್ಣ ಕಟ್ಟಿದರು. ಆದರೆ ನಾವಿಂದು ಬಸವಣ್ಣನವರ ವಚನಗಳನ್ನು ವಿಶ್ವಕ್ಕೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೆ. ಬಸವಣ್ಣನವರ ತತ್ವಾದರ್ಶಗಳನ್ನು ಇಂದಿನ ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಸಮೀಕರಸಬಹುದಾಗಿದ್ದು, ವಚನ ಸಾಹಿತ್ಯ ಪ್ರತಿಯೊಬ್ಬರ ಮನೆ ಮನಗಳಲ್ಲಿ ಬೇಳಗಲಿ ಎಂದು ಹೇಳಿದರು.ವಿ.ಸಿ.ಅಕ್ಕಿ ಸ್ಮಾರಕದ ಶಿಕ್ಷಣ ಸಂಸ್ಥೆಯ ಅದಿತಿ ಅಕ್ಕಿ, ಪಿಎಚ್ಡಿ ಪದವಿ ಪಡೆದ ಪ್ರಮಿಳಾ ಮಡಿವಾಳರ, ಆನಂದ ಚಕ್ರಸಾಲಿ ಅವರನ್ನು ಶ್ರೀಮಠದ ಪರವಾಗಿ ಸತ್ಕರಿಸಲಾಯಿತು. ಗುರುಮಹಾಂತ ಶ್ರೀಗಳು, ಶಿರೂರಿನ ಡಾ.ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವ ಕೇಂದ್ರದ ಶಿವಾನಂದ ರುಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆಯಲ್ಲಿ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಅವರು ನಿರ್ದೇಶಿಸಿ ಅಭಿನಯಿಸಿದ ಶಿವಶರಣ ಹರಳಯ್ಯ ರೂಪಕ ಹಾಗೂ ವಿಜಯ ಸಿಂಗಶೆಟ್ಟಿ ಕಲಾ ತಂಡದ ನೃತ್ಯ ರೂಪಕ ಜನರ ಮನ ಸೆಳೆದವು.