ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ವಾಣಿಜ್ಯರತ್ನ ಪ್ರಶಸ್ತಿ ಪುರಸ್ಕೃತ ಪಟ್ಟಣದ ಉದ್ಯಮಿ ಶರಣು ಸಜ್ಜನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕಾಮರಾಜ ಬಿರಾದಾರ ಹಾಗೂ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಗೊಂಡ ವೆಂಕನಗೌಡ ಪಾಟೀಲ ಅವರಿಗೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ)ಯವರು ಸೋಮವಾರ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಪಟ್ಟಣದ ಗಣ್ಯರ, ಉದ್ಯಮಿಗಳ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಿದರು.ಈ ವೇಳೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ)ಯವರು ಮಾತನಾಡಿದ ಅವರು, ಶರಣು ಸಜ್ಜನ ಅವರು ಬಡತನದಲ್ಲಿ ಹುಟ್ಟಿ ಸಣ್ಯಉದ್ಯಮಿ ಪ್ರಾರಂಭಿಸಿ ಬಳಿಕ ದಾಲ್ಮಿಲ್ ಇಂಡಸ್ಟ್ರಿಯನ್ನು ಸ್ಥಾಪಿಸಿ ಎಲ್ಲರ ವಿಶ್ವಾಸಾರ್ಹ ಸಾಧನೆ ಮಾಡುವ ಮೂಲಕ ಬೆಳೆದು ನಿಂತಿದ್ದಾರೆ. ಅಷ್ಟು ಮಾತ್ರವಲ್ಲದೇ ಸದಾ ಸ್ನೇಹಜೀವಿಯಾಗಿ ಪಟ್ಟಣ ಯಾವುದೇ ಕಾರ್ಯಕ್ರಮಗಳಿರಲಿ, ಸಾಮಾಜಿಕ ಕಾರ್ಯವಿರಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲದರಲ್ಲೂ ಮುಂದಾಳತ್ವ ವಹಿಸಿ ಯಶಸ್ವಿಗೊಳಿಸುವ ಕ್ರಿಯಾಶೀಲರು. ಅವರಿಗೆ ವಾಣಿಜ್ಯ ಪ್ರಶಸ್ತಿ ದೊರೆತಿರುವುದು ಇತರರಿಗೆ ಮಾದರಿಯಾಗಿದ್ದಾರೆ. ಅದರಂತೆ ಸಣ್ಣ ವಯಸ್ಸಿನಲ್ಲೇ ಕಾಮರಾಜ ಬಿರಾದಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡಾಂಭೆಯ ತೇರು ಎಳೆಯುವ ಜವಾಬ್ದಾರಿ ಹೊತ್ತುಕೊಂಡಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ನಿಲ್ಲುವುದು ಸಾಮಾನ್ಯದ ವಿಷಯವಲ್ಲ. ಸಂಘಟಿತ ಸ್ವಭಾವ, ತಾಳ್ಮೆ, ಎಲ್ಲವನ್ನು ಸಹಿಸಿಕೊಳ್ಳುವ ತಾಯಿ ಹೃದಯ ಇರಬೇಕಾಗುತ್ತದೆ. ಸದ್ಯ ಅದೆಲ್ಲವನ್ನು ಒಪ್ಪಿಕೊಂಡು ಮುನ್ನಡೆಯಲು ಹೊರಟಿರುವ ಕಾಮರಾಜ ಅವರು ಕೈಗೊಳ್ಳು ಯಾವುದೇ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಎಲ್ಲ ಕಾರ್ಯಗಳ ಯಶಸ್ವಿಗೆ ಪಟ್ಟಣದ ಎಲ್ಲ ಗಣ್ಯರು, ಮುಖಂಡರು ಸೇರಿದಂತೆ ಎಲ್ಲರೂ ಟೊಂಕಕಟ್ಟಿ ನಿಂತುಕೊಳ್ಳುವ ಮೂಲಕ ಯಶಸ್ವಿಗೊಳಿಸಲು ಸಹಕಾರಿಸುತ್ತೇವೆ ಎಂಬುವುದನ್ನು ಈ ಸಂದರ್ಭದಲ್ಲಿ ಭರವಸೆ ನೀಡುತ್ತೇವೆ. ಜತೆಗೆ ನೇರ ನಿಷ್ಠುರತೆಗೆ ಹೆಸರಾಗಿರುವ ವೆಂಕನಗೌಡ ಪಾಟೀಲ ಅವರು ಸದ್ಯ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವುದು ಸಂತಸದ ವಿಷಯ. ಆದರೆ, ವೀರಶೈವ ಮಹಾಸಭಾದಲ್ಲಿ ರಾಜಕೀಯ ಪ್ರವೇಶ ಹೆಚ್ಚಾಗಿದೆ. ನೇರವಾಗಿ ಧೈರ್ಯದಿಂದ ಮಾತನಾಡುವ ಮೂಲಕ ವಾಕ್ ಚಾತುರ್ಯ ಹೊಂದಿದ್ದಾರೆ. ಅಲ್ಲಿರುವ ಸಮಸ್ಯೆಗಳನ್ನು ತಿಳಿಗೊಳಿಸುವಲ್ಲಿ ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.ಈ ವೇಳೆ ಗಣ್ಯ ಉದ್ಯಮಿಗಳಾದ ಬಸವರಾಜ ಮೋಟಗಿ, ಸುನೀಲ ಇಲ್ಲೂರ, ರಮೇಶ ಓಸ್ವಾಲ್, ಎಂ.ಬಿ.ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಸಂಗಣ್ಣ ಬಿರಾದಾರ(ಜಿಟಿಸಿ) ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗಫೂರಸಾಬ್ ಮಕಾಂದಾರ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಎಸ್.ಎಸ್.ಆಲೂರ, ಗುರಲಿಂಗಪ್ಪಗೌಡ ಪಾಟೀಲ, ಮುತ್ತು ಕಡಿ, ಸುಧೀರ ನಾವದಗಿ, ರಾಜುಗೌಡ ಗೌಡರ, ರುದ್ರುಗೌಡ ಅಂಗಡಗೇರಿ, ಸುರೇಶ ಪಾಟೀಲ, ಅಮರೇಶ ಗೂಳಿ, ವೈ.ಎಚ್.ವಿಜಯಕರ, ಪಿಂಟು ಸಾಲಿಮನಿ, ಸಂಗಪ್ಪ ಮೇಲಿಮನಿ, ಶ್ರೀಶೈಲ ಪೂಜಾರಿ, ಹುಸೇನ್ ಮುಲ್ಲಾ, ಪುರಸಭೆ ಸದಸ್ಯ ಮೈಬೂಬ್ ಗೊಳಸಂಗಿ, ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು.
---------ಕೋಟ್...ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲ ಗಣ್ಯರು ಮುಖಂಡರು, ಸಾಹಿತಿಗಳು, ಉದ್ಯಮಿಗಳು ಪಟ್ಟಣದ ಯಾವುದೇ ಸಾಮಾಜಿಕ ಕಾರ್ಯವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗದೇ ಜಾತಿ, ಮತ, ಪಂಥ ಎನ್ನದೇ ಎಲ್ಲರೂ ಒಗ್ಗಟ್ಟಾಗಿ ನಿಂತು ಎಲ್ಲ ಜನರು ಮೆಚ್ಚುವ ಹಾಗೆ ಸಾಂಸ್ಕೃತಿಕ, ಹಬ್ಬ ಹರಿದಿನಗಳು ಸೇರಿದಂತೆ ಎಲ್ಲ ಸಾಮಾಜಿಕ ಕಾರ್ಯಗಳನ್ನು ಯಶಸ್ವಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ.-ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು.