ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ನಿಂದ ರೈತರಿಗೆ ನೀಡಿರುವ ಸಾಲ ವಸೂಲಾತಿ ಮಾಡುವ ಜೊತೆಗೆ, ರೈತರಿಗೆ ಹೊಸ ಸಾಲ ನೀಡಲು ಕ್ರಮವಹಿಸಬೇಕು ಎಂದು ಆಡಳಿತ ಮಂಡಳಿ ನಿರ್ದೇಶಕರಿಗೆ ಷೇರುದಾರರು ಒತ್ತಾಯಿಸಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು, ಬ್ಯಾಂಕ್ 2.90 ಕೋಟಿ ಸಾಲ ನೀಡಿ ನಷ್ಟದಲ್ಲಿದೆ. ಸಾಲ ವಸೂಲಾತಿ ಮಾಡಿ ನಷ್ಟ ತುಂಬುವುದು ಯಾವಾಗ.?, ಇತ್ತೀಚಿನ ದಿನಗಳಲ್ಲಿ ರೈತರಿಗೆ ಸರಿಯಾದ ರೀತಿಯಲ್ಲಿ ಹೊಸ ಸಾಲ ನೀಡುತ್ತಿಲ್ಲ. ಸಕಾಲಕ್ಕೆ ಸಾಲ ವಸೂಲಾತಿ ಮಾಡುವ ಜೊತೆಗೆ ಬ್ಯಾಂಕ್ ನಷ್ಟ ತುಂಬಿ ಲಾಭದಾಯಕವಾಗಿ ನಡೆಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ನಲ್ಲಿ ಕೆಲಸ ಮಾಡುವ ನೌಕರರು ಷೇರುದಾರರೊಂದಿಗೆ ಸಹನೆಯಿಂದ ವರ್ತಿಸುವಂತೆ ತಿಳಿಹೇಳಬೇಕು. ಜೊತೆಗೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸುವ ಎಲ್ಲಾ ವಿಷಯಗಳನ್ನು ಕಡ್ಡಾಯವಾಗಿ ರೆಕಾರ್ಡ್ ಮಾಡಬೇಕು. ಆ ವಿಷಯಗಳನ್ನು ಮುಂದಿನ ಸಭೆಯಲ್ಲಿ ಮಂಡನೆ ಮಾಡಬೇಕು ಎಂದರು.ಷೇರು ಬಂಡವಾಳವನು ಹೆಚ್ಚಳ ಮಾಡಬೇಡಿ, ಆಡಿಟ್ ವರದಿ ಬಂದ ಬಳಿಕ ಅಧ್ಯಕ್ಷರು, ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಯಾವುದಾರರೂ ಲೋಪದೋಷಗಳು ಕಂಡುಬಂದಿಲ್ಲ ಸರಿಪಡಿಸಿ ಬಳಿಕ ಆಡಿಟ್ ವರದಿಯನ್ನು ಷೇರುದಾರರಿಗೆ ನೀಡಬೇಕು ಎಂದು ಷೇರುದಾರರಾದ ಮಹದೇವು, ಜನಾರ್ಧನ್ ಸೇರಿದಂತೆ ಹಲವರು ಷೇರುದಾರರು ಒತ್ತಾಯಿಸಿದರು.
ಬ್ಯಾಂಕ್ ನಷ್ಟದಲ್ಲಿ ನಡೆಯುತ್ತಿರುವುದರಿಂದ ಕಳೆದ 20 ವರ್ಷಗಳಿಂದ ಯಾರ ಅವಧಿಯಲ್ಲಿ ಬ್ಯಾಂಕ್ ನಷ್ಟದಲ್ಲಿ ನಡೆದುಕೊಂಡು ಬಂದಿದೆ ಎಂಬುದರ ಬಗ್ಗೆ ಈಗಿನ ಆಡಳಿತ ಮಂಡಳಿ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಷೇರುದಾರ ನಂದೀಶ್ ಒತ್ತಾಯಿಸಿದರು.
ಸಾಲ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಹಳೇ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಮುಂದಿ ಆ ಷೇರುದಾರರು ಅರ್ಜಿ ಹಾಕಿದ ತಕ್ಷಣವೇ ಹೊಸ ಸಾಲ ಮಂಜೂರು ಮಾಡಲು ಕ್ರಮವಹಿಸಲಾಗುವುದು ಎಂದು ನಿರ್ದೇಶಕ ಯಶ್ವಂತ್ಕುಮಾರ್ ಭರವಸೆ ನೀಡಿದರು.
ಬ್ಯಾಂಕ್ ಆವರಣದಲ್ಲಿ ಮಳಿಗೆ ನಿರ್ಮಾಣ ಮಾಡುವ ವಿಚಾರವಾಗಿ ನಡೆದ ಚರ್ಚೆಯಲ್ಲಿ ನಿರ್ದೇಶಕ ಮುರುಳಿ ಮಧ್ಯಪ್ರವೇಶಿಸಿ, ಮಳಿಗೆ ನಿರ್ಮಾಣ ಮಾಡುವ ವಿಚಾರದಲ್ಲಿ ನಮ್ಮ ಆಡಳಿತ ಮಂಡಳಿ ಸಿದ್ದವಿದ್ದೇವೆ. ಆದರೆ, ನಮ್ಮ ಬ್ಯಾಂಕ್ ನಷ್ಟದಲ್ಲಿದೆ. ಜಿಲ್ಲಾ ಸಹಕಾರ ಬ್ಯಾಂಕ್ನಿಂದ ಮಳಿಗೆ ನಿರ್ಮಾಣ ಮಾಡಲು ಅನುಮತಿ ದೊರೆಯುವುದಿಲ್ಲ. ಹಾಗಾಗಿ ಮಳಿಗೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆಗೆ ಮಾಹಿತಿಗೆ ಮಾಹಿತಿ ನೀಡಿದರು.ಅಧ್ಯಕ್ಷ ಶಿವಣ್ಣ ಮಾತನಾಡಿ, ಬ್ಯಾಂಕ್ನಿಂದ ಸಾಲ ಪಡೆದುಕೊಂಡಿರುವ ಷೇರುದಾರರ ರೈತರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ನ ಅಭಿವೃದ್ದಿಗೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಮೇಲ್ಮಟ್ಟದ ಅಧಿಕಾರಿಗಳ ಗಮನ ಸೆಳೆದು ಹೆಚ್ಚಿನ ಅನುದಾನ ತಂದು ರೈತರಿಗೆ ಹೊಸ ಸಾಲ ನೀಡಲು ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷೆ ಸುನಂದ, ನಿರ್ದೇಶಕರಾದ ಎಚ್.ಬಿ.ಚಲುವೇಗೌಡ, ನಾಗಶೆಟ್ಟಿ, ಗಿರಿಯಾರಹಳ್ಳಿ ವಾಸು, ಕೆ.ಕುಮಾರ್, ಎಚ್.ಎನ್.ದಯಾನಂದ, ಸಿ.ಎಂ.ಚಂದ್ರಶೇಖರ್, ಕೆ.ಆರ್.ಸುರೇಶ್, ಎಸ್.ಯೋಗಲಕ್ಷ್ಮಿ, ಎಚ್.ಎಂ.ಆಶಾಲತಾ, ನರೇಂದ್ರಬಾಬು, ನಾಗೇಗೌಡ, ಪ್ರಭಾರಿ ವ್ಯವಸ್ಥಾಪಕ ಕೆ.ಸಂಪತ್ಕುಮಾರ್, ಸಿಬ್ಬಂದಿ ಬಿ.ಪಿ.ಪುನೀತ್ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.