ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಬಸವನಹಳ್ಳಿ ಗ್ರಾಮದ ಡಾಲರ್ಸ್ ಕಾಲೋನಿಯ ಖಾಸಗಿ ಲೇಔಟ್ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ಗಳನ್ನು ಪೊಲೀಸರು ತೆರವುಗೊಳಿಸಿದ ಪರಿಣಾಮ, ಕಳೆದ ಹದಿನೈದು ದಿನಗಳಿಂದ ಅಲ್ಲೇ ಆಶ್ರಯ ಪಡೆದಿದ್ದ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಂಡಿರುವ ಘಟನೆ ನಡೆದಿದೆ.ಸಂತ್ರಸ್ತರ ಹೇಳಿಕೆಯ ಪ್ರಕಾರ, ಸಂಬಂಧಿತ ಜಾಗವು ಗ್ರಾಮ ನಕ್ಷೆಯಲ್ಲಿ ‘ಹರಿಜನ ಕೇರಿ’ ಎಂದು ನಮೂದಾಗಿರುವ ಹಿನ್ನೆಲೆಯಲ್ಲಿ ತಾವು ಅಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಜಾಗದ ಮಾಲೀಕರು ಇದು ಖಾಸಗಿ ಲೇಔಟ್ ಆಗಿದ್ದು, ಬಡ ಕುಟುಂಬಗಳು ಅತಿಕ್ರಮಣ ಮಾಡಿಕೊಂಡಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶೆಡ್ಗಳನ್ನು ತೆರವುಗೊಳಿಸಿ ಸ್ಥಳವನ್ನು ಖಾಲಿ ಮಾಡಿಸಿದ್ದಾರೆ. ಈ ಕ್ರಮದ ಬೆನ್ನಲ್ಲೇ ತಡರಾತ್ರಿ ಬೆಂಗಳೂರಿನಿಂದ ಬಂದಿದ್ದಾರೆ ಎನ್ನಲಾದ ಆರು ಮಂದಿ ಅಪರಿಚಿತರು ಸ್ಥಳಕ್ಕೆ ಧಾವಿಸಿ, ಲಾಂಗ್ ಹಾಗೂ ಬೇಸ್ಬಾಲ್ ಸ್ಟಿಕ್ಗಳನ್ನು ಹಿಡಿದು ಜಾಗ ಖಾಲಿ ಮಾಡುವಂತೆ ನಿರಾಶ್ರಿತರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಡ ಕುಟುಂಬಗಳು ಹಾಕಿಕೊಂಡಿದ್ದ ಟಾರ್ಪಾಲ್ಗಳಿಗೆ ಬೆಂಕಿ ಹಚ್ಚಿ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಘಟನೆಯ ವೇಳೆ ಸ್ಥಳೀಯ ಮಹಿಳೆಯರು ಹಾಗೂ ಅಪರಿಚಿತರ ನಡುವೆ ತೀವ್ರ ವಾಗ್ವಾದ ಮತ್ತು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಲೇಔಟ್ ಮಾಲೀಕರ ಕ್ರಮಕ್ಕೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಹಾಗೂ ಪುರಸಭೆಯ ಮಾಜಿ ಸದಸ್ಯ ಮುಖೇಶ್ ಶೆಟ್ಟಿ ಅವರ ಕುಮ್ಮಕ್ಕಿದೆ ಎಂದು ಸಂತ್ರಸ್ತರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಗಳಿಗೆ ಸಂಬಂಧಪಟ್ಟವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಪ್ರಸ್ತುತ ಮಹಿಳೆಯರು, ಮಕ್ಕಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರು ಹಾಗೂ ಸೂರಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದು, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ತಮಗೆ ಸೂಕ್ತ ಆಶ್ರಯ ಹಾಗೂ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿವೆ.ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.