ಚಿರತೆ ದಾಳಿಗೆ ಕುರಿ, ಮೇಕೆ ಬಲಿ

| Published : Jun 04 2025, 02:03 AM IST

ಸಾರಾಂಶ

ಹನೂರು ತಾಲೂಕಿನ ಗಂಗನ ದೊಡ್ಡಿ ಗ್ರಾಮದ ರೈತ ಲೋಕನಾಥ್ ಜಮೀನಿನಲ್ಲಿ ಚಿರತೆ ಕುರಿಯನ್ನು ಕೊಂದಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಹನೂರು

ಚಿರತೆ ತಡರಾತ್ರಿ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಜಮೀನಿನ ಮನೆಯ ಮುಂದೆ ಇದ್ದ ಮೇಕೆಯನ್ನು ಕೊಂದು ತಿಂದಿರುವ ಘಟನೆ ನಡೆದಿದ್ದು, ರೈತರು ಭಯಬೀತರಾಗಿದ್ದಾರೆ.ತಾಲೂಕಿನ ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಬಫರ್ ಜೋನ್ ವಲಯದ ಅರಣ್ಯ ಪ್ರದೇಶದಿಂದ ಸೋಮವಾರ ತಡರಾತ್ರಿ ಗಂಗನ ದೊಡ್ಡಿ ಗ್ರಾಮದ ರೈತ ಲೋಕನಾಥ ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕುರಿಯನ್ನು ಚಿರತೆ ದಾಳಿ ಮಾಡಿ ತಿಂದು ಹಾಕಿದೆ. ಮತ್ತೊಂದು ಪ್ರಕರಣದಲ್ಲಿ ರಾಮಪುರ ಸಮೀಪದ ಅಪ್ಪಿಕುಳಿ ರವಿ ಎಂಬುವರ ಜಮೀನಿನಲ್ಲಿ ಚಿರತೆ ಮೇಕೆಯ ಮೇಲೆ ಎರಗಿ ಕೊಂದು ಹಾಕಿದೆ. ಚಿರತೆಯ ನಿರಂತರ ಉಪಟಳದಿಂದ ರೈತರ ಸಾಕುಪ್ರಾಣಿಗಳು ಬಲಿಯಾಗುತ್ತಿದೆ ಈ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ, ರೈತರ ಆರೋಪ:

ಕಳೆದ ಹಲವು ತಿಂಗಳುಗಳಿಂದ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ ಹಾಗೂ ವಿವಿಧ ಗ್ರಾಮಗಳಲ್ಲಿ ದಿನನಿತ್ಯ ರಾತ್ರಿಗೆ ಕ್ರೂರ ಪ್ರಾಣಿ ಚಿರತೆ ರೈತರ ಜಮೀನುಗಳಲ್ಲಿ ಇರುವ ಸಾಕುಪ್ರಾಣಿಗಳಾದ ಕುರಿ ಕೋಳಿ ಮೇಕೆ ಹಾಗೂ ನಾಯಿಗಳನ್ನು ತಿನ್ನುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ಸಾಕುಪ್ರಾಣಿಗಳು ಬಲಿಯಾಗುತ್ತಿದೆ ಜೀವಭಯದಲ್ಲೇ ರೈತರು ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ:

ಅರಣ್ಯದಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳನ್ನು ಚಿರತೆ ಒಂದು ತಿನ್ನುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಕ್ರಮ ಕೈಗೊಳ್ಳಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾಕುಪ್ರಾಣಿಗಳೇ ಟಾರ್ಗೆಟ್:

ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಗುಡ್ಡಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ವಾಸಿಸುವ ಮತ್ತು ಉಡುತೊರೆ ಹಳ್ಳದ ಅಂಚಿನಲ್ಲಿ ಬರುವ ರೈತರ ಜಮೀನುಗಳಲ್ಲಿರುವ ಸಾಕುಪ್ರಾಣಿಗಳನ್ನು ಚಿರತೆ ಟಾರ್ಗೆಟ್ ಮಾಡಿ ಒಂದು ತಿನ್ನುತ್ತಿರುವುದರಿಂದ ಈ ಭಾಗದಲ್ಲಿ ವಾಸಿಸುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಭಯಭೀತರಾಗಿದ್ದು ಈ ಬಗ್ಗೆ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಅರಣ್ಯ ಅಧಿಕಾರಿಗಳು ಭೇಟಿ, ಪರಿಶೀಲನೆ:

ಚಿರತೆ ದಾಳಿ ಮಾಡಿ ವಿವಿಧಡೆ ಮೇಕೆ ಕುರಿ ಕೊಂದು ಹಾಕಿರುವ ಬಗ್ಗೆ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ವಿನಾಯಕ ಭೀಮಸಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸಿಗುವ ಪರಿಹಾರ ನೀಡಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಹಲವು ತಿಂಗಳುಗಳಿಂದ ಚಿರತೆ ನಿರಂತರವಾಗಿ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ ಮತ್ತು ಉಡುತೊರೆ ಹಳ್ಳದ ಅಂಚಿನಲ್ಲಿ ಬರುವ ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವುದರಿಂದ ಮುಂದಿನ ದಿನಗಳಲ್ಲಿ ಪರಿಹಾರ ನೀಡದಿದ್ದಲ್ಲಿ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.

ಅಮ್ಜದ್ ಖಾನ್, ತಾಲೂಕು ಅಧ್ಯಕ್ಷ, ರಾಜ್ಯ ರೈತ ಸಂಘ