ಸಾರಾಂಶ
ಕೊಪ್ಪಳ: ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ರೈಲ್ವೆ ಸ್ಟೇಷನ್ ಅಂಗನವಾಡಿ ಮಕ್ಕಳನ್ನು ಸ್ಥಳಾಂತರ ಮಾಡಲಾಗಿದ್ದು, ಈಗ ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪಾಲಕರು ತಮ್ಮ ಮಕ್ಕಳ ಕುರಿತು ಇದ್ದ ಜೀವಭಯದಿಂದ ದೂರವಾಗಿದ್ದಾರೆ.ಬಿಸಿಲಲ್ಲಿ ಪಾಠ ಆಲಿಸುವ ಅಂಗನವಾಡಿ ಮಕ್ಕಳು ಎನ್ನುವ ತಲೆಬರಹದಡಿ ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಮಕ್ಕಳ ಹಿತದೃಷ್ಟಿಯಿಂದ ರೈಲ್ವೆ ಸ್ಟೇಷನ್ ಏರಿಯಾದಲ್ಲಿ ಬಾಡಿಗೆಯ ಸುಸಜ್ಜಿತ ಕಟ್ಟಡಕ್ಕೆ ಮಂಗಳವಾರ ಸ್ಥಳಾಂತರಿಸಿದೆ.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಕನ್ನಡಪ್ರಭ ವರದಿ ಗಮನಿಸಿ ತಕ್ಷಣ ಕ್ರಮ ವಹಿಸುವ ಬಗ್ಗೆ ಆದೇಶಿಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಸಿಡಿಪಿಒ ಜಯಶ್ರೀ ಆರ್. ಬಾಡಿಗೆ ಕಟ್ಟಡ ಗುರುತಿಸಿ, ಅಂಗನವಾಡಿ ಸ್ಥಳಾಂತರ ಮಾಡಿದ್ದಾರೆ.ಸೋಮವಾರ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಪ್ರಾರಂಭಿಸಿದ್ದಾರೆ. ಈ ಕುರಿತು ಮಾಹಿತಿಯನ್ನು ತಾರದೇ ಇರುವುದಕ್ಕೆ ಅಂಗನವಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳಿಗೆ ಸಮಸ್ಯೆಯಾದರೆ ತಕ್ಷಣ ಮೇಲಧಿಕಾರಿಗಳಿಗೆ ಸೂಚಿಸಿದರೆ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಶಿವಶರಣಪ್ಪ ಗದ್ದಿ, ಭುವನೇಶ್ವರಿ ಶೀಲವಂತರ ಇದ್ದರು.