ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರಿನ ಐಎಸ್‌ಬಿಆರ್ ಬ್ಯುಸಿನೆಸ್ ಸ್ಕೂಲ್ ಹಾಗೂ ಟಿಐಇ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಡ್ಯದ ಎಸ್‌ಬಿಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆ, ನಾಯಕತ್ವ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ‘ಶೈನಿಂಗ್ ಸ್ಟಾರ್ ಅವಾರ್ಡ್-2026’ ನೀಡಿ ಗೌರವಿಸಲಾಯಿತು.

ಐಎಸ್‌ಬಿಆರ್ ಸಂಸ್ಥೆಯ ಅಧ್ಯಕ್ಷರಾದ ಡಾ.ಮನೋಜ್ ಕೊಠಾರಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಡಾ.ಮೀರಾ ಶಿವಲಿಂಗಯ್ಯ ಅವರು ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ಧೀರ ಮಹಿಳೆಗೆ ಪ್ರಶಸ್ತಿ ನೀಡಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಮೀರಾ ಶಿವಲಿಂಗಯ್ಯ ಅವರು ಈ ಗೌರವವನ್ನು ಸಂಸ್ಥೆಯ ಎಲ್ಲ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಮರ್ಪಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ವಜ್ರೇಶ್ವರಿ ಕಂಬೈನ್ಸ್‌ನ ಮಾಲೀಕರು ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಐಎಸ್‌ಟಿಡಿ ಚೇರ್ಮನ್ ಡಾ. ಮನೋಹರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಇಂದು ಕುಂ.ವೀರಭದ್ರಪ್ಪ ಅವರೊಂದಿಗೆ ಸಂವಾದ


ಮಂಡ್ಯ: ಕನ್ನಡ ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ವತಿಯಿಂದ ಲೇಖಕ ಕುಂ.ವೀರಭದ್ರಪ್ಪ ಅವರೊಂದಿಗೆ ನಾಳೆ (ಜೂ.೭) ಬೆಳಗ್ಗೆ ೧೦ ಗಂಟೆಯಿಂದ ೧ ಗಂಟೆಯವರೆಗೆ ನಗರದ ಗಾಂಧಿ ಭವನದಲ್ಲಿ ಆಪ್ತ ಸಂವಾದ ನಡೆಯಲಿದೆ. ಕುಂ.ವೀರಭದ್ರಪ್ಪ ವಿರಚಿತ ಅರಮನೆ ಕೃತಿ ಕುರಿತು ಸಂವಾದ ನಡೆಸಲಾಗುವುದು. ಈ ಕೃತಿ ತನ್ನ ಭಾಷೆಯ ಸೊಗಡು, ಕಥಾ ವಸ್ತು ಹಾಗೂ ನಿರೂಪಣೆಯ ದೃಷ್ಟಿಯಿಂದ ಓದುವ ಕಾದಂಬರಿ ಮಾತ್ರವಲ್ಲದೆ ಹಾಡುವ ಕಾದಂಬರಿಯೂ ಆಗಿದೆ.