ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕರ್ಣ
ಒಂದೆಡೆ ಪರ್ವತ ಗಿರಿಶಿಖರ ಸಾಲಿನ ವಿಹಂಗಮ ನೋಟ, ಇನ್ನೊಂದೆಡೆ ವೀಶಾಲ ಸಾಗರ ನೋಟ. ಮಳೆಯ ಅಬ್ಬರದ ನಡುವೆಯೂ ಕಡಲತಟದಲ್ಲಿ ಸಾಂಪ್ರದಾಯಿಕ ಸೊಗಡಿನ ದೈವಿಕ ವಿವಾಹ ಮಹೋತ್ಸವ ಜನಸಾಗರದ ನಡುವೆ ಸೋಮವಾರ ಸಂಜೆ ಅದ್ಧೂರಿಯಾಗಿ ನಡೆಯಿತು.ಇಲ್ಲಿನ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದ ಶಿವಗಂಗಾ ವಿವಾಹ ಮಹೋತ್ಸವ ಸೋಮವಾರ ಸಾಯಂಕಾಲ ಗೋಕರ್ಣದಿಂದ ಸ್ವಲ್ಪ ದೂರ ಕಡಲ ತೀರದಲ್ಲಿ ವೈಭವದಿಂದ ನಡೆಯಿತು. ಗಂಗಾಷ್ಟಮಿಯ ಮುಂಜಾವಿನಲ್ಲಿ ವಿವಾಹ ನಿಶ್ಚಯವಾದಂತೆ ಇಲ್ಲಿನ ಗೋಕರ್ಣ -ಗಂಗಾವಳಿ ನಡುವಿನ ಕಡಲ ತೀರದಲ್ಲಿ ಸೂರ್ಯ ಪಶ್ಚಿಮಮುಖವಾಗಿ ತೆರಳುವ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ಮಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು.
ಮುಖ್ಯ ಕಡಲತೀರದಿಂದ ೫ ಕಿಮೀ ಗಂಗಾವಳಿ ಕಡಲತೀರದವರೆಗೆ ತಳಿರು ತೋರಣ ವಿಶಿಷ್ಟ ಮಂಟಪ ಜೊತೆಯಲ್ಲಿ ಹಾಲಕ್ಕಿ ಒಕ್ಕಕಲಿಗ ಸಮುದಾಯದ ಜಾನಪದ ಹಾಡು ಗುಮಟೆ ಪಾಂಗ್, ಎಲ್ಲೆಲ್ಲೂ ಸಂಭ್ರಮದೊಂದಿಗೆ ನಡೆದ ವಿವಾಹ ಮಹೋತ್ಸವಕ್ಕೆ ಕಡಲಿನ ಅಬ್ಬರ, ವೇದಘೋಷ ವಿಶಿಷ್ಟ ತೋರಣ, ಜಾನಪದ ಹಾಡು ಮೆರಗನ್ನು ನೀಡಿದವು. ವಿವಾಹದ ನಂತರ ಉತ್ಸವವು ಭಕ್ತರು ಆರತಿ ನೀಡಿ ದೇವ ದಂಪತಿಗಳನ್ನು ಬರಮಾಡಿಕೊಂಡರು. ಮುಖ್ಯ ಕಡಲತೀರದ ಬಳಿ ಇರುವ ಬ್ರಹ್ಮರ್ಷಿದೈವರಾತರ ಆಶ್ರಮಕ್ಕೆ ಚಿತ್ತೈಯಿಸಿ ವಿಶೇಷ ಪೂಜೆ ಸ್ವೀಕರಿಸಿ ಬಳಿಕ ಮಂದಿರಕ್ಕೆ ಮರಳಿತು. ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ರೂಢಿಗತ ಪರಂಪರೆಯಂತೆ ನಡೆದ ದೈವಿಕ ಕಾರ್ಯದಲ್ಲಿ ಊರಿನ ಎಲ್ಲಾ ಸಮಾಜದ ಭಕ್ತಸಮೂಹದವರು ಉಪಸ್ಥಿತರಿದ್ದರು.ಮಾವಿನ ತೋರಣ ಪಡೆಯಲು ಪೈಪೋಟಿ:ವಿವಾಹ ನಡೆಯುವ ಕಡಲ ತೀರದ ಸ್ಥಳದಲ್ಲಿ ಹಾಕಿದ ಮಾವಿನ ತೋರಣದ ಎಲೆ ಪಡೆದುಕೊಂಡು ವನೆಯಲ್ಲಿ ತಂದು ಇಡುವುದರಿಂದ ಇಷ್ಟಾರ್ಥ ಸಿದ್ದಿ, ಸಂಪತ್ತು ವೃದ್ದಿಯಾಗುತ್ತದೆ ಎಂಬ ನಂಬಿಕೆ ಇದ್ದು, ಅದರಂತೆ ಇದನ್ನ ಪಡೆಯಲು ತೀವ್ರಪೈಪೋಟಿ ನಡೆಯಿತು. ಪೊಲೀಸರು ಜನರನ್ನ ನಿಯಂತ್ರಿಸಲು ಹರಸಾಹಸ ಮಾಡ ಬೇಕಾಯಿತು.
ವರುಣನ ಆರ್ಭಟ:ದೇವರ ಉತ್ಸವ ತೆರಳುವ ವೇಳೆ ಮೋಡಕವಿದ ವಾತಾವರಣವಿದ್ದು, ಕಡಲಂಚಿನಲ್ಲಿ ತೆರಳುತ್ತಿದ್ದಂತೆ ಗುಡುಗು ಮಿಂಚಿನೊಂದಿಗೆ ಮಳೆಯೂ ಅಬ್ಬರಿಸಿತು. ಅರ್ಧಗಂಟೆಗೂ ಅಧಿಕ ಕಾಲ ಸುರಿದ ಮಳೆಯಲ್ಲೇ ಉತ್ಸವ ಸಾಗಿದ್ದು, ಮರಳಿ ಬರುವ ವೇಳೆ ಮಳೆ ನಿಂತಿತ್ತು. ಮಳೆಯನ್ನ ಸಹ ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ವಿಶೇಷವಾಗಿತ್ತು.