ಸಾರಾಂಶ
ಗದಗ: ಭಾರತದಲ್ಲಿ ಸನಾತನ ಧರ್ಮ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸೂರ್ಯನಂತೆ ಉದಯಿಸಿದ್ದು ಶಿವಾಜಿ ಮಹಾರಾಜರು. ಕಳೆದ ನಾಲ್ಕು ದಶಕಗಳಿಂದ ಶಿವಾಜಿ ಮಹಾರಾಜರು ಕಣ್ಮರೆಯಾಗಿದ್ದರೂ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ಅವರು ಬುಧವಾರ ರಾತ್ರಿ ಗದಗ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶ್ರೀರಾಮ ಸೇನೆ ಹಾಗೂ ಶಿವರಾಮಕೃಷ್ಣ ಸೇವಾ ಟ್ರಸ್ಟ್, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ ಅಂಗವಾಗಿ 398 ನೇ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಾತಿಗಳ ಹೆಸರಿನಲ್ಲಿ ನಮ್ಮ ಧರ್ಮವನ್ನು ಇಂದು ಮರೆಯುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಶಿವಾಜಿ ಮಹಾರಾಜರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಶಿವಾಜಿ ಮಹಾರಾಜರಂತೆ ತ್ಯಾಗ ಬಲಿದಾನ ಮಾಡಲು ಸಾಧ್ಯವಿಲ್ಲ. ಆದರೆ, ನಮ್ಮ ದುರಾಸೆಯನ್ನು ಬಿಟ್ಟು ಕನಿಷ್ಠ ಅವರ ತತ್ವ ಅಳವಡಿಸಿಕೊಂಡರೇ ನಾವು ಬದಲಾಗಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಜಾತೀಯತೆ ಹೋಗಲಾಡಿಸದಿದ್ದರೇ ಸಾವಿರ ಶಿವಾಜಿ ಜಯಂತಿ ಮಾಡಿದರೂ ಏನೂ ಪ್ರಯೋಜನವಿಲ್ಲ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಜಾಗೃತಿ ನುಡಿಗಳನ್ನಾಡಿದ ಭಾವನಾ ಆರ್. ಗೌಡ ಅವರು, ಶಿವಾಜಿ ಮಹಾರಾಜರು ಜನಿಸದಿದ್ದರೇ ಭಾರತ ದೇಶವು ಇಸ್ಲಾಮಿಕ್ ದೇಶವಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೂ ಶಿವಾಜಿ ಮಹಾರಾಜರ ತತ್ವ, ಆದರ್ಶ ಪ್ರೇರಣೆಗಳಾಗಿದ್ದವು. ಭಾರತದ ಪಕ್ಕದಲ್ಲಿರುವ ಅರಬ್ಬಿ ಸಮುದ್ರ ಅರಬ್ಬರ ಹೆಸರಾಗಿ ಇಂದಿಗೂ ಉಳಿದುಕೊಂಡಿದೆ. ಪರಕೀಯರು ಭಾರತದ ಮನೆ-ಮನೆಗೆ ದಾಳಿ ಮಾಡಿ, ತಾಯಿಯನ್ನು ಮಮ್ಮಿ, ತಂದೆಯನ್ನು ಡ್ಯಾಡಿಯನ್ನಾಗಿ ಪರಿವರ್ತಿಸಿ ಹೋದರು ಎಂಜು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೂ ಮೊದಲು ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆ ಜರುಗಿತು.ಭಾರತದಲ್ಲಿದ್ದು, ಇಸ್ಲಾಂ ಮನಸ್ಥಿತಿ ಇರುವವರನ್ನು ನಾವು ವಿರೋಧಿಸುತ್ತೇವೆ. ಭಾರತ್ ಮಾತಾಕೀ ಜೈ ಎನ್ನುವವರನ್ನು ನಾವು ವಿರೋಧಿಸುವುದಿಲ್ಲ. ಆದರೆ, ಭಾರತದ ನೆಲದಲ್ಲಿದ್ದು ಬೇರೆ ದೇಶದ ಬಗ್ಗೆ ಅಭಿಮಾನ ಹೊಂದಿದವರನ್ನು ನಾವು ವಿರೋಧಿಸುತ್ತೇವೆ. ಮಕ್ಕಳಿಗೆ ಮೊದಲು ಧರ್ಮದ ಪಾಠ ಮಾಡಬೇಕಾದ ಅವಶ್ಯಕತೆ ಇದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿದರೇ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಾಗುತ್ತದೆ ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.
ಭಾರತ ಇಂದು ಭಾರತವಾಗಿ ಉಳಿಯಲು ಪ್ರಮುಖ ಕಾರಣ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದಾರೆ. ಅಂದು ಅವರ ಜನನ ಆಗದಿದ್ದರೇ ಇಂದು ಭಾರತ ಇಸ್ಲಾಮಿಕ್ ರಾಷ್ಟ್ರ ಆಗುವುದರಲ್ಲಿ ಸಂದೇಹವಿರುತ್ತಿರಲಿಲ್ಲ. ಭಾರತೀಯರ ಕೊನೆಯ ಉಸಿರು ಇರುವವರೆಗೂ ಶಿವಾಜಿ ಮಹಾರಾಜರನ್ನು ಆರಾಧಿಸುತ್ತಾ, ಅವರ ಶೌರ್ಯ, ಪರಾಕ್ರಮ ಅಳವಡಿಸಿಕೊಳ್ಳಬೇಕು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಪಿ. ಹೇಳಿದರು.