ಹಳಿಯಾಳ: ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ನಾಯಕತ್ವ ಮತ್ತು ಸ್ವರಾಜ್ಯದ ಬಗ್ಗೆ ಅವರ ದೃಷ್ಟಿಕೋನವನ್ನು ಸ್ಮರಿಸುವ ದಿಸೆಯಿಂದ ಆಚರಿಸುವ ಜಯಂತಿ ಆಚರಣೆಗಳು ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಗುರುವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರೆಂದರೆ ದೇಶದ ಗೌರವ, ಸ್ವಾಭಿಮಾನವಾಗಿದ್ದಾರೆ. ಮೊಘಲರ ಆಡಳಿತದಿಂದ ದೇಶವನ್ನು ಸ್ವತಂತ್ರಗೊಳಿಸಿ ದೇಶ ಕಟ್ಟುವ ಕನಸನ್ನು ಸಾಕಾರಗೊಳಿಸಲು ಅವರು ಮಾಡಿದ ಹೋರಾಟಗಳು, ತ್ಯಾಗಗಳು ಸದಾ ಮಾದರಿಯಾಗಿವೆ ಎಂದರು.ರಾಜ್ಯ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕುಮಾರ ಉಡಚಪ್ಪಾ ಬೊಬಾಟೆ ಮಾತನಾಡಿ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾಟಾಚಾರದ ಆಚರಣೆಯಾಗುತ್ತಿದ್ದು, ಸರ್ಕಾರಿ ಕಾರ್ಯಕ್ರಮಗಳಾಗುತ್ತಿವೆ. ಜಯಂತಿ ಆಚರಣೆಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಆಸಕ್ತಿಯಿಲ್ಲದಿರುವುದು ಎದ್ದು ಕಾಣುತ್ತಿದೆ ಎಂದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ ಪಾಕ್ರೆ ಮಾತನಾಡಿ, ಬಸವಣ್ಣ, ಡಾ. ಅಂಬೇಡ್ಕರ್, ಶಿವಾಜಿ ಮಹಾರಾಜರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ, ಅವರು ಇಡೀ ಸಮಾಜವನ್ನು ಪ್ರತಿಬಿಂಬಿಸುವ ಮಹಾನ್ ಸಾಧಕರು. ಆದರೆ ನಾವು ಒಂದೊಂದು ಸಮಾಜದ ವ್ಯಾಪ್ತಿಗೆ ಅವರನ್ನು ಮೀಸಲಾಗಿಡುತ್ತಿದ್ದೇವೆ ಎಂದರು.ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕಿರಣ ದುಮಾಳೆ ಅವರು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಬಗ್ಗೆ ಉಪನ್ಯಾಸ ನೀಡಿದರು.
ಶ್ರೀ ಜೀಜಾಮಾತಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಂಗಲಾ ಕಶೀಲಕರ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಮರಾಠ ಸಮಾಜದ ಹಿರಿಯರಾದ ವೈ.ಡಿ. ಬಿರ್ಜೆ, ಹಿರಿಯ ನಾಗರಿಕ ವೇದಿಕೆ ಜಿ.ಡಿ. ಗಂಗಾಧರ ಇದ್ದರು. ಕಂದಾಯ ಇಲಾಖೆಯ ಪರಶುರಾಮ ಶಿಂದೆ ಹಾಗೂ ಕಿರಣಕುಮಾರ ಜಕ್ಕಲಿ ಕಾರ್ಯಕ್ರಮ ನಿರ್ವಹಿಸಿದರು. ಶಿವಾಜಿ ಮಹಾರಾಜರಾಗಿ ಹಲವಾರು ಬಾರಿ ಪಾತ್ರ ಧರಿಸಿ ಪ್ರದರ್ಶನ ನೀಡಿದ ಕಲಾವಿದ, ಗಾಯಕ ಅರುಣ ಗೋಂದಳಿ ಹಾಗೂ ಉಪನ್ಯಾಸ ನೀಡಿದ ಕಿರಣ ದುಮಾಳೆ ಅವರನ್ನು ಸನ್ಮಾನಿಸಲಾಯಿತು.