ಸಾರಾಂಶ
ಸಮಾಜದ ಮುಖಂಡರ ಸಮ್ಮುಖ ನಾಮಪತ್ರ ಸಲ್ಲಿಕೆ । ಬೆಂಬಲ ನೀಡುವಂತೆ ಮುಖಂಡರಲ್ಲಿ ಮನವಿ
ಕನ್ನಡಪ್ರಭ ವಾರ್ತೆ ಹಾಸನಹಾಸನ ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆ 2024-29 ವರೆಗೆ ೫ ವರ್ಷಗಳ ಅವಧಿಗೆ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ ಕಟ್ಟಾಯ ಶಿವಕುಮಾರ್ ಅವರು ಸಮಾಜದ ಮುಖಂಡರ ಸಮ್ಮುಖದಲ್ಲಿ ತಾಲೂಕು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಈ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಟ್ಟಾಯ ಶಿವಕುಮಾರ್ ಮಾಧ್ಯಮದೊಂದಿಗೆಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಘಟಕದಿಂದ ಹಾಸನ ಜಿಲ್ಲಾ ತಾಲೂಕು ಚುನಾವಣೆಯನ್ನು ಘೋಷಣೆ ಮಾಡಲಾಗಿದ್ದು, ಜೂ.27 ರಿಂದ ನಾಮಪತ್ರ ಸಲ್ಲಿಸಲು ಹೇಳಿದೆ. ನಾನು ಹಾಸನ ತಾಲೂಕಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಸದಸ್ಯರು ಅವಿರೋಧವಾಗಿ ಆಯ್ಕೆ ಆಗಬೇಕು ಎಂಬುದು ಅಭಿಲಾಷೆಯಾಗಿದೆ. ಚುನಾವಣೆ ನಡೆದರೂ ಸಹ ನಮಗೆ ಮತವನ್ನು ನೀಡಬೇಕಾಗಿ ನಾನು ವಿನಂತಿ ಮಾಡುತ್ತೇನೆ’ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಆರ್.ಗುರುದೇವ್ ಮಾಧ್ಯಮದೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತ ಚುನಾವಣೆ ನಡೆಯುತ್ತಿದ್ದು, ಎಲ್ಲಾ ತಾಲೂಕಿನ ಚುನಾವಣಾಧಿಕಾರಿಗಳು ಅಪ್ಲಿಕೇಶನ್ ಪಡೆಯುತ್ತಿದ್ದಾರೆ. ಹಾಸನದಲ್ಲಿ ಕಟ್ಟಾಯ ಶಿವಕುಮಾರ್ ಮತ್ತು ಎಚ್.ಎನ್.ನಾಗೇಶ್ ಸೇರಿದಂತೆ ಹಲವಾರು ಯುವಕರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಚುನಾವಣೆ ನಡೆದು ಸಮಾಜದಲ್ಲಿ ಒಡಕು ಮೂಡಬಾರದು. ಒಗ್ಗಟ್ಟು ಪ್ರದರ್ಶನಕ್ಕಾಗಿ ಎಲ್ಲಾ ಯುವಕರು ಕುಳಿತು ಒಬ್ಬರನ್ನು ಆಯ್ಕೆ ಮಾಡಿದರೆ ನಮ್ಮ ಸಮಾಜ ಒಂದಾಗಿ ಹೋಗುತ್ತದೆ ಎಂದು ಹೇಳಿದರು.ಚುನಾವಣೆಗೆ ಅವಕಾಶ ಮಾಡಿಕೊಟ್ಟು ಅದರಿಂದ ತೊಂದರೆ ಅನುಭವಿಸುವುದು ಬೇಡ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಒಂದು ಸಂಘಟನೆ ಮಾಡುವುದು ಉತ್ತಮ ಎಂದು ಮನವಿ ಮಾಡಿದರು.
ಕೆಲ ದಿನಗಳ ಹಿಂದೆ ಯುವಕರು ಎಲ್ಲಾ ಸೇರಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಮಾಡಿರುವುದು ಸಂತೋಷ ತಂದಿದೆ. ಈ ರೀತಿ ಒಗ್ಗಟ್ಟಾಗಿ ಕಾರ್ಯಕ್ರಮ ಮಾಡಬಹುದು ಎಂಬುದನ್ನು ಯುವಕರು ತೋರಿಸಿದ್ದು, ಈ ಚುನಾವಣೆಯು ಕೂಡ ಅದರಂತೆ ಒಬ್ಬರನ್ನು ಆರಿಸಲಿ ಎಂದು ಹೇಳಿದರು.ಹಾಸನ ವೀರಶೈವ ಲಿಂಗಾಯತ ಜಿಲ್ಲಾ ಸಂಘದ ನಿರ್ದೇಶಕ ಶೋಭನ್ ಬಾಬು, ಮುಖಂಡರಾದ ಎಚ್.ಎನ್.ನಾಗೇಶ್, ಶೆಟ್ಟಿಹಳ್ಳಿ ಧರ್ಮ, ಮದನ್, ಬ್ಯಾಡರಹಳ್ಳಿ ಶಿವಪ್ಪ, ಪಾಪು, ಹಾಲಿ ಉಪಾಧ್ಯಕ್ಷ ಕುಮಾರಸ್ವಾಮಿ, ಲೀಲಾವತಿ, ಧರ್ಮಪ್ಪ ಇತರರು ಹಾಜರಿದ್ದರು.